ಕಾಪಿರೈಟ್ ಕೇಸ್ನಿಂದ ಕಾಂಗ್ರೆಸ್ ಟ್ವಿಟರ್ ಖಾತೆ ಬಂದ್!

ಬೆಳಗಾವಿ: ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿದ ವಿಡಿಯೊ ತುಣುಕಿಗೆ ಕೆಜಿಎಫ್ನ ಹಾಡೊಂದನ್ನು ಬಳಸಿದ್ದರಿಂದ ಕಾಪಿರೈಟ್ ಉಲ್ಲಂಘನೆಯಾಗಿದೆ ಎಂಬ ದೂರು ಆಧರಿಸಿ ಕಾಂಗ್ರೆಸ್ನ ಟ್ವಿಟರ್ ಖಾತೆಯನ್ನು ನಿರ್ಬಂಧಿಸಲು ಬೆಂಗಳೂರು ಕೋರ್ಟ್ ಆದೇಶ ನೀಡಿದೆ.
ಈ ಕುರಿತು ನಿನ್ನೆ (ನ 7) ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿದ್ದರು.
ಮಾಜಿ ಸಚಿವ ವಿನಯ ಕುಲಕರ್ಣಿ 54ನೇ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ‘ರಾಹುಲ್ ಗಾಂಧಿ ಡ್ಯಾನ್ಸ್ಗೆ ನಮ್ಮ ಕಾರ್ಯಕರ್ತರೊಬ್ಬರು ಕೆಜಿಎಫ್ ಹಾಡು ಸೇರಿಸಿ ವಿಡಿಯೊ ಮಾಡಿದ್ದರು. ಅದನ್ನು ಟ್ವಿಟರ್ನಲ್ಲಿ ಪ್ರಕಟಿಸಲಾಗಿತ್ತು. ಇದನ್ನೇ ನೆಪವಾಗಿಸಿ ನಮ್ಮ ಟ್ವಿಟರ್ ಖಾತೆ ಬ್ಲಾಕ್ ಮಾಡಿಸಲಾಗಿದೆ. ನೀವು ಟ್ವಿಟರ್ ಖಾತೆಯನ್ನದಾರೂ ಬ್ಲಾಕ್ ಮಾಡಿಸಿ ಅಥವಾ ರಾಹುಲ್ ಗಾಂಧಿ ಅವರನ್ನಾದರೂ ಜೈಲಿಗೆ ಹಾಕಿಸಿ. ನಮ್ಮ ಹೋರಾಟ, ಪ್ರಯತ್ನಗಳು ನಿಲ್ಲುವುದಿಲ್ಲ. ನಾವು ಎಂಥದ್ದೇ ಸಂದರ್ಭವನ್ನು ಎದುರಿಸಲು ಸಜ್ಜಾಗಿದ್ದೇವೆ’ ಎಂದು ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
‘ನನ್ನನ್ನು ಅಥವಾ ವಿನಯ್ ಕುಲಕರ್ಣಿಯನ್ನು ಬೇಕಿದ್ದರೂ ಜೈಲಿಗೆ ಹಾಕಿಸಿ. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಿ. ಜನರ ಹೃದಯವನ್ನು ಜೈಲಿಗೆ ಹಾಕಲು ಸಾಧ್ಯವಿಲ್ಲ. ಅದು ಸದಾ ನಮ್ಮ ಪರವಾಗಿ ಮಿಡಿಯುತ್ತಿರುತ್ತದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಪ್ರಧಾನಮಂತ್ರಿಯ ಹುದ್ದೆಯನ್ನೇ ಸ್ಥಾನವನ್ನು ತ್ಯಾಗ ಮಾಡಿದವರು. ಇಂಥ ತ್ಯಾಗಿಗಳ ಮುಂದಾಳತ್ವದ ಪಕ್ಷದಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರವನ್ನು ತೆಗೆಯಲು ಎಲ್ಲರೂ ಕೈಜೋಡಿಸಬೇಕಿದೆ’ ಎಂದು ಅವರು ಇದೇ ಸಂದರ್ಭದಲ್ಲಿ ಕರೆ ನೀಡಿದರು.
