ತಿರುಪತಿಯಲ್ಲಿ ಅಪ್ಪು ಫೋಟೋ ತೆಗೆಸಿದ್ದಕ್ಕೆ ಶಿವಣ್ಣ ಬೇಸರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಗಲಿ ಆರು ತಿಂಗಳು ಕಳೆದಿದೆ. ಅಪ್ಪು ಅವರನ್ನ ಕಳೆದುಕೊಂಡ ಅಭಿಮಾನಿಗಳು ಇಂದಿಗೂ ಕಣ್ಣೀರು ಹಾಕ್ತಿದ್ದಾರೆ. ಆದರೆ ಇತ್ತೀಚೆಗೆ ತಿರುಪತಿಯಲ್ಲಿ ನಡೆದ ಘಟನೆ ಅಪ್ಪು ಅಭಿಮಾನಿಗಳನ್ನು ರೊಚ್ಚಿಗೆಬ್ಬಿಸಿದೆ. ಅಪ್ಪು ಅಭಿಮಾನಿಯೊಬ್ಬರ ಕಾರಿನ ಮೇಲಿದ್ದ ಅಪ್ಪು ಸ್ಟಿಕರ್ ಅನ್ನು ತಿರುಪತಿಯಲ್ಲಿ ತೆಗೆಸಿದ್ದು ಇದೀಗ ಈ ಕುರಿತು ನಟ ಶಿವರಾಜ್ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಅಪ್ಪು ಇನ್ನಿಲ್ಲವಾದ್ರೂ ಅವರ ಮೇಲಿನ ಅಭಿಮಾನ ಮಾತ್ರ ಒಂದಿಷ್ಟೂ ಕಡಿಮೆಯಾಗಿಲ್ಲ. ಜಾತ್ರೆ, ಸಮಾರಂಭ ಪ್ರತಿಯೊಂದರಲ್ಲೂ ಪುನೀತ್ ಫೋಟೋ ಇಟ್ಟು ಪೂಜಿಸುತ್ತೇವೆ. ಆದ್ರೂ ನೆರೆಯ ಆಂಧ್ರದ ತಿರುಪತಿಯಲ್ಲಿ ಕನ್ನಡಿಗರಿಗೆ, ಅಪ್ಪು ಭಾವಚಿತ್ರಕ್ಕೆ ತಿರುಪತಿಯಲ್ಲಿ ಅವಮಾನ ಮಾಡಲಾಗಿತ್ತು.ಅಭಿಮಾನಿ ಕಾರಿನಿಂದ ಅಪ್ಪು ಪೋಟೊ ತೆಗಿಸಿದಕ್ಕೆ ಶಿವರಾಜ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದು, “ಅಪ್ಪು ಪೋಟೊ ತೆಗೆಸಿರುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ, ಯಾರದ್ದೇ ಆಗಲಿ ಆ ರೀತಿ ಮಾಡಬಾರದು. ನನ್ನ ತಮ್ಮ ಅಂತ ಹೇಳುತ್ತಿಲ್ಲ. ಯಾಕೆಂದರೆ ಅಭಿಮಾನಿಗಳು, ಅಭಿಮಾನದಿಂದ ಫೋಟೋ ಹಾಕಿರುತ್ತಾರೆ” ಎಂದು ಶಿವರಾಜ್ಕುಮಾರ್ ಹೇಳಿದ್ದಾರೆ.
“ಎಲ್ಲರಲ್ಲೂ ಒಂದು ಫೀಲಿಂಗ್ ಇರುತ್ತೆ ಅದಕ್ಕೆ ಮಸಿ ಬಳಿಯಬಾರದು. ಒಬ್ಬ ಮನುಷ್ಯನಿಗೆ ಇನ್ನೊಬ್ಬ ಮನುಷ್ಯ ಹರ್ಟ್ ಮಾಡಬಾರದು. ನಮಗೆ ಇಷ್ಟ ಇರುತ್ತೋ ಇಲ್ವೋ ಗೊತ್ತಿಲ್ಲ ಯಾರು ಆ ರೀತಿ ಮಾಡಬಾರದು. ವಿಐಪಿ ಆಗಿರಲಿ ಸಾಮಾನ್ಯನಾಗಿರಲಿ ಹರ್ಟ್ ಮಾಡಬಾರದು ಅವರಲ್ಲಿ ಒಂದು ಫೀಲಿಂಗ್ಸ್ ಇರುತ್ತೆ. ಅಭಿಮಾನಿಗಳ ಮನಸ್ಸಿಗೆ ಯಾರೂ ನೋವುಂಟು ಮಾಡುವ ಕೆಲಸ ಮಾಡಬಾರದು” ಎಂದು ಶಿವಣ್ಣ ಹೇಳಿದರು.
ಬೆಂಗಳೂರಿನಿಂದ ಕುಟುಂಬ ಸಮೇತ ಆಗಮಿಸಿದ್ದ ಅಪ್ಪು ಅಭಿಮಾನಿ ತುಂಬ ನೋವಿನಿಂದ ಅಪ್ಪು ಭಾವಚಿತ್ರದ ಸ್ಟಿಕರ್ ತೆಗೆಯುತ್ತಿದ್ದ ದೃಶ್ಯವನ್ನು ಕರವೇ ಗಜಸೇವೆ ರಾಜ್ಯಾಧ್ಯಕ್ಷ ತಾಯ್ನಾಡು ರಾಘವೇಂದ್ರ ವೀಡಿಯೋ ರೆಕಾರ್ಡ್ ಮಾಡಿ ಘಟನೆಯನ್ನು ವಿವರಿಸಿದ್ದಾರೆ. ಇದನ್ನು ಗಮನಿಸಿದ ರಕ್ಷಣಾ ಸಿಬ್ಬಂದಿ ರಾಘವೇಂದ್ರ ಕಾರಿನಲ್ಲಿದ್ದ ಕನ್ನಡ ಬಾವುಟ ಶಲ್ಯವನ್ನು ತೆಗೆದುಕೊಂಡಿದ್ದಾರೆ. ಬೆಟ್ಟದಿಂದ ವಾಪಾಸ್ ಬರುವಾಗ ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಅದೆಷ್ಟೇ ವಿವರಿಸಿ ಹೇಳಿದ್ರೂ ಅಪ್ಪು ಫೋಟೋ ಇರಿಸಲಿಲ್ಲ.
