ಡಿವೈಡರ್ಗೆ ಗುದ್ದಿದ ಬೈಕ್: ಸ್ಥಳದಲ್ಲೇ ಹಾರಿ ಹೋಯ್ತು ಇಬ್ಬರ ಪ್ರಾಣ!

ಧಾರವಾಡ: ಬೈಕೊಂದು ರಸ್ತೆ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಧಾರವಾಡ ಉಪನಗರ ಪೊಲೀಸ್ ಠಾಣೆಯ ಬಳಿಯ ಕೆಸಿ ಪಾರ್ಕ್ ಹತ್ತಿರ ತಡರಾತ್ರಿ ಸಂಭವಿಸಿದೆ.
ಪರ್ಹಾನ್ ಹಾಗೂ ಮತೀನ್ ಎನ್ನುವ ಇಬ್ಬರು ಯುವಕರು ಮೃತರೆಂದು ಗುರುತಿಸಲಾಗಿದೆ. ಇನ್ನೂ ದುರ್ಘಟನೆಗೆ ಯುವಕರಿಬ್ಬರ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಹೇಳಿದ್ದಾರೆ. ಅತೀ ವೇಗವಾಗಿ ಬಂದ ಬೈಕ್ ಮೊದಲು ತಮ್ಮ ಮುಂದೆ ಸಾಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆಸಿದ್ರು, ಬಳಿಕ ಕಾರಿನಿಂದ ತಪ್ಪಿಸಿಕೊಳ್ಳಲು ಹೋಗಿ ಡಿವೈಡರ್ಗೆ ರಭಸವಾಗಿ ಡಿಕ್ಕಿ ಹೊಡೆದ್ರು ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇಬ್ಬರು ಬೈಕ್ ಸವಾರರ ತಲೆ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದ ಕಾರಣ ತೀವ್ರ ರಕ್ತ ಸ್ರಾವದಿಂದ ಸ್ಥಳದಲ್ಲಿಯೇ ಇಬ್ಬರು ಕೊನೆಯುಸಿರೆಳೆದಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಸಂಚಾರ ಠಾಣೆ ಪೊಲೀಸರು ಮೃತರಿಬ್ಬರ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಿ, ಪರಿಶೀಲನೆ ನಡೆಸಿದರು. ಸದ್ಯ ಇಬ್ಬರ ಮೃತ ದೇಹವು ಜಿಲ್ಲಾಸ್ಪತ್ರೆಯಲ್ಲಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಈ ಕುರಿತು ಧಾರವಾಡ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
