ಕಲ್ಲು ಹಿಡಿದು ದಾಳಿ ಮಾಡಿರುವುದು ಖಂಡನೀಯ: ಪ್ರಮೋದ್ ಮುತಾಲಿಕ್ ಕಿಡಿ

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆ ಬಳಿ ನಡೆದಿರುವ ಘಟನೆ ಖಂಡನೀಯವಾದುದ್ದಾಗಿದೆ. ಇದನ್ನು ಶ್ರೀ ರಾಮ ಸೇನೆಯಿಂದ ನಾವು ಖಂಡಿಸುತ್ತೇವೆ. ಇಸ್ಲಾಂ ಧರ್ಮ ಅಂದರೆ ಶಾಂತಿ ಸೌಹಾರ್ದತೆ ಹಾಗೂ ಹೊಂದಾಣಿಕೆಯಿಂದ ಹೋಗುವ ಧರ್ಮ ಎಂದು ಹೇಳುವವರು ಮಾಡುವ ಕೃತ್ಯ ಇದೇನಾ..?. ನ್ಯಾಯಯುತವಾಗಿ ಹೋರಾಟ ಮಾಡುವ ಬದಲಿಗೆ ಈ ರೀತಿ ಹಿಂಸಾಚಾರ ಮಾಡಿರುವುದು ಎಷ್ಟರಮಟ್ಟಿಗೆ ಸರಿ, ನಿಜಕ್ಕೂ ಇದು ಸರಿಯಲ್ಲ ಎಂದು ಶ್ರೀರಾಮಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.
ಈ ಕುರಿತು ಮಾಧ್ಯಮಕ್ಕೆ ಹೇಳಿಕೆ ನೀಡಿರುವ ಅವರು ಮೆಕ್ಕಾ ಮದೀನಾದ ಮಸೀದಿಯ ಮೇಲೆ ಭಗವಾನ್ ಧ್ವಜವನ್ನು ಹಾರಿಸಿರುವ ಒಂದು ವಿಡಿಯೋ ಪೋಸ್ಟ್ ಮಾಡಿದ್ದಕ್ಕೆ ಇಷ್ಟೊಂದು ಕ್ರೌರ್ಯವನ್ನು ಮೆರೆಯುವುದು ಸರಿಯಲ್ಲ. ಇಸ್ಲಾಂ ಧರ್ಮಕ್ಕೆ ತನ್ನದೇ ಆದ ಮಹತ್ವವಿದೆ ಎಂದು ಹೇಳುವವರು ಶಾಂತಿ, ಸೌಹಾರ್ದತೆ, ಹೊಂದಾಣಿಕೆಯನ್ನ ನಮ್ಮ ಧರ್ಮ ಸಾರುತ್ತದೆ ಎನ್ನುತ್ತಾರೆ.
ಅಂತಹ ಇಸ್ಲಾಂ ಧರ್ಮದ ನಿಯಮಗಳನ್ನು ಗಾಳಿಗೆ ತೂರಿ ಏಕಾಏಕಿ ಕಲ್ಲು ತೂರಾಟದಂತಹ ಹಿಂಸಾಚಾರ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. ನೀವು ನ್ಯಾಯ ಪಡೆಯುವುದಕ್ಕಾಗಿ ಕಾನೂನು ಪ್ರಕಾರ ಹೋರಾಟ ಮಾಡಿ, ನ್ಯಾಯಯುತವಾಗಿ ಧರಣಿ ಮಾಡಿ, ಆದರೆ ಅದನ್ನು ಬಿಟ್ಟು ಕಲ್ಲು ಇಟ್ಟಿಗೆ ಶಸ್ತ್ರಗಳನ್ನು ಹಿಡಿದು ಬೀದಿಗೆ ಬರುವುದಕ್ಕೆ ಇದು ತಾಲಿಬಾನ್ ಅಲ್ಲಾ. ಭಾರತ ದೇಶ. ಡಾ.ಬಾಬಾ ಸಹೇಬರು ನೀಡಿರುವ ಸಂವಿಧಾನದ ಆಧಾರದ ಮೇಲೆ ನಡೆಯುತ್ತಿದೆ.
ಅದಕ್ಕೆ ನೀವು ಸೇರಿದಂತೆ ಎಲ್ಲರೂ ತಲೆಬಾಗಿ ನಡೆಯಬೇಕು. ಅದನ್ನು ಬಿಟ್ಟು ಈ ರೀತಿ ಏಕಾಏಕಿ ಸಾವಿರಾರು ಜನರನ್ನು ಗುಂಪು ಕಟ್ಟಿಕೊಂಡು ಬಂದು ಹಿಂಸಾಚಾರ ಮಾಡುವುದು ಸರಿಯಲ್ಲ. ಈ ಘಟನೆ ನಡೆದಿರುವ ರೀತಿ ನೋಡಿದರೆ ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ಇದರಲ್ಲಿ ಪಿಎಫ್ಐ ಹಾಗೂ ಎಐಎಂಐಎಂ ಪಕ್ಷದ ಪಾಲಿಕೆ ಸದಸ್ಯರು ಭಾಗಿಯಾಗಿದ್ದಾರೆ. ಈ ಘಟನೆಗೆ ಇವರ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.
