ಮದುವೆಗೆ ಮನೆಯವರ ವಿರೋಧ: ಸಾವಿನಲ್ಲಿ ಒಂದಾದ ಪ್ರೇಮಿಗಳು!

ಧಾರವಾಡ: ಇಂದಿನ ಯುವಕ-ಯುವತಿಯರು ಪ್ರೀತಿಯಲ್ಲಿ ಬೀಳುವುದು ಸಹಜವಾಗಿದೆ. ಕೆಲವರು ತಮ್ಮ ತಮ್ಮ ಅಭಿಪ್ರಾಯಗಳಿಂದ ದೂರ ಆದ್ರೆ, ಇನ್ನೂ ಕೆಲವರು ತಮ್ಮ ಮನೆಯವರ ಭಯದಿಂದ ತಮ್ಮ ಪ್ರೇಮವನ್ನು ತ್ಯಾಗ ಮಾಡುತ್ತಾರೆ. ಆದರೆ ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿನ ಪ್ರೇಮಿಗಳಿಬ್ಬರು ಮನೆಯವರಉ ಮದುವೆಗೆ ವಿರೋಧ ಮಾಡಿದಕ್ಕೆ ಸಾವಿನ ಹಾದಿ ತುಳಿದಿದ್ದಾರೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ತಡಹಾಳ ಗ್ರಾಮದ ಸಾವಿತ್ರಿ ಮುತ್ತಪ್ಪ ನರಗುಂದ ಹಾಗೂ ಮಲ್ಲಪ್ಪ ದುರ್ಗಪ್ಪ ಮಾದರ ಎಂಬ ಪ್ರೇಮಿಗಳಿಬ್ಬರು ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದರೆ ಯುವತಿಯ ಮನೆಯವರು ಪ್ರೀತಿಯ ವಿಷಯ ತಿಳಿದು, ಬೇರೆ ಜಾತಿಯ ಯುವಕನಾಗಿದ್ದಾನೆ ಎಂದು ವಿರೋಧ ವ್ಯಕ್ತಪಡಿಸಿ ಬೇರೊಬ್ಬರೊಂದಿಗೆ ಮದುವೆ ನಿಶ್ಚಯ ಮಾಡಿದ್ದಾರೆ. ಇದರಿಂದ ಮನನೊಂದ ಸಾವಿತ್ರಿ ಹಾಗೂ ಮಲ್ಲಪ್ಪ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಇವರನ್ನು ಕುಟುಂಬದ ಸದಸ್ಯರು ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಪ್ರೇಮಿಗಳು ಸಾವನ್ನಪ್ಪಿದ್ದಾರೆ.
ಆತ್ಮಹತ್ಯೆಗೆ ಯತ್ನಿಸಿದ ಇಬ್ಬರು ಪ್ರೇಮಿಗಳನ್ನು ಅವರ ಕುಟುಂಬಸ್ಥರು ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಕರೆ ತಂದು ದಾಖಲು ಮಾಡಿದ್ದರು. ಆಸ್ಪತ್ರೆಗೆ ದಾಖಲಿಸುವ ಮುನ್ನ ಇಬ್ಬರ ಸ್ಥಿತಿ ಗಂಭೀರವಾಗಿತ್ತು ಎಂದು ಹೇಳಲಾಗಿತ್ತು. ಆದರೂ ಕೂಡಾ ಇಬ್ಬರನ್ನು ಹೇಗಾದರೂ ಮಾಡಿ ಜೀವ ಉಳಿಸಬೇಕು ಎನ್ನವ ನಿಟ್ಟಿನಲ್ಲಿ ಕಿಮ್ಸ್ ವೈದ್ಯರು, ಚಿಕಿತ್ಸೆ ನೀಡುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿತ್ರಿ ಮೊದಲು ಸಾವನಪ್ಪಿದ್ದು, ನಂತರ ಯುವಕ ಮಲ್ಲಪ್ಪ ಕೂಡಾ ಸ್ವಲ್ಪ ಹೊತ್ತಿನ ನಂತರ ಕೊನೆಯುಸಿರು ಎಳೆದಿದ್ದಾನೆ. ಸದ್ಯ ಮಕ್ಕಳಿಬ್ಬರನ್ನು ಕಳೆದುಕೊಂಡ ಎರಡು ಕುಟುಂಬಗಳು ಕಣ್ಣೀರು ಹಾಕುತ್ತಿವೆ. ಈ ಕುರಿತು ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
