ಇನ್ಮುಂದೆ ಹೋಟೆಲ್ ತಿಂಡಿ, ತಿನಿಸು ಮತ್ತಷ್ಟು ದುಬಾರಿ

ಬೆಂಗಳೂರು: ಗ್ಯಾಸ್ ಸಿಲಿಂಡರ್, ಅಡುಗೆ ಎಣ್ಣೆ, ತೈಲದ ದರ ಹೆಚ್ಚಿದ ಬಳಿಕ ಇದೀಗ ಮತ್ತೆ ಗ್ರಾಹಕರಿಗೆ ದರ ಹೆಚ್ಚಳದ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹೋಟೆಲ್ ಗಳಲ್ಲಿ ಊಟ, ತಿಂಡಿ, ಕಾಫಿ, ಟೀ ದರದಲ್ಲಿ ಏರಿಕೆ ಮಾಡಲು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರು ಹೋಟೆಲ್ ಮಾಲೀಕರ ಸಭೆ ನಡೆಸಿದ್ದು ಸಭೆಯಲ್ಲಿ ಕನಿಷ್ಟ ಶೇ 10ರಷ್ಟು ದರ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಯಾವ, ಯಾವ ತಿಂಡಿ ತಿನಿಸುಗಳ ಮೇಲೆ ದರ ಏರಿಕೆ ಮಾಡಬೇಕು ಎಂಬುದು ಆಯಾ ಹೋಟೆಲ್ ನವರಿಗೆ ಬಿಟ್ಟಿದ್ದು. ಕೋವಿಡ್ ಆರ್ಥಿಕ ಸಂಕಷ್ಟದಿಂದಾಗಿ ಹೋಟೆಲ್ ಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಆತಂಕದಿಂದ ಇಷ್ಟು ದಿನ ತಿಂಡಿ, ತಿನಿಸುಗಳ ದರ ಏರಿಕೆ ಮಾಡಿರಲಿಲ್ಲ. ಆದ್ರೆ ಇತ್ತೀಚೆಗೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದ್ದು ಈ ಹಿನ್ನೆಲೆಯಲ್ಲಿ ತಿಂಡಿಗಳ ಬೆಲೆ ಹೆಚ್ಚಿಸಿದ್ದಾಗಿ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಹೇಳಿದ್ದಾರೆ.
ತಿಂಡಿಗಳ ದರದಲ್ಲಿ 5 ರೂಪಾಯಿ ಹಾಗೂ ಕಾಫಿ, ಟೀ ದರದಲ್ಲಿ 2 ರೂಪಾಯಿ ಹೆಚ್ಚಳ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸದ್ಯ ಬೆಂಗಳೂರು ನಗರದಲ್ಲಿ ಮಾತ್ರವೇ ದರ ಏರಿಕೆ ನಿರ್ಧಾರ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ದರ ಏರಿಕೆ ಮಾಡುವ ನಿರೀಕ್ಷೆ ಇದೆ.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಸಾಕಷ್ಟು ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನತೆ ಇದೀಗ ಹೋಟೆಲ್ ತಿಂಡಿ, ತಿನಿಸುಗಳ ಮೇಲೆ ಬೆಲೆ ಏರಿಸಿರೋದಕ್ಕೆ ಅಸಮಾಧಾನಗೊಂಡಿದ್ದಾರೆ. ಈಗಾಗಲೇ ಕೋವಿಡ್ ಕಾರಣದಿಂದ ಅದೆಷ್ಟೋ ಕುಟುಂಬಗಳು ಬೀದಿಗೆ ಬಂದು ನಿಂತಿವೆ. ಈ ಮಧ್ಯೆ ಸರ್ಕಾರ ಪದೇ ಪದೇ ಜನರ ಮೇಲೆ ದರ ಹೆಚ್ಚಳದ ಬಿಸಿ ಮುಟ್ಟಿಸ್ತಿರೋದು ಯಾವ ನ್ಯಾಯ ಎಂದು ಸಾರ್ವಜನಿಕರು ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸ್ತಿದ್ದಾರೆ.
