ಯುಗಾದಿ ಹಬ್ಬದ ಸಂಭ್ರಮ: ಬೆಳಿಗ್ಗೆಯಿಂದಲೇ ದೇಗುಲಗಳಿಗೆ ಭಕ್ತಸಾಗರ

ಕಲಬುರಗಿ: ಹಿಂದೂ ಧರ್ಮದ ಪ್ರಕಾರ ಹೊಸ ವರ್ಷ ಆರಂಭದ ದಿನ, ಯುಗಾದಿ ಹಬ್ಬವನ್ನ ಜಿಲ್ಲೆಯಲ್ಲಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ. ಬೆಳಿಗ್ಗೆಯಿಂದಲೇ ದೇವಸ್ಥಾನಗಳಿಗೆ ಭಕ್ತ ಸಂಕುಲ ಆಗಮಿಸುತ್ತಿದೆ. ಕಲ್ಯಾಣ ಕರ್ನಾಟಕ ಜನರ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ ದರ್ಶನಕ್ಕೆ ಭಕ್ತ ಸಮೂಹ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.
ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬಕ್ಕೆ ಬಹಳ ಮಹತ್ವ ಇದೆ. ಕ್ಯಾಲೆಂಡರ್ ಪ್ರಕಾರ ಜನವರಿ ತಿಂಗಳಿಗೆ ಹೊಸ ವರ್ಷ ಆರಂಭವಾದ್ರೆ ಪಂಚಾಂಗದ ಪ್ರಕಾರ ಯುಗಾದಿಗೆ ಹೊಸ ವರ್ಷ ಆರಂಭ ಎಂದು ಪರಿಗಣಿಸಲಾಗುತ್ತದೆ. ಯುಗದ ಆದಿ ಯುಗಾದಿ’ ಎಂಬ ಶಬ್ಧ ಸಂಸ್ಕೃತದ ‘ಯುಗ’ ಮತ್ತು ‘ಆದಿ’ ಎಂಬ ಎರಡು ಶಬ್ಧಗಳಿಂದ ಕೂಡಿದೆ. ಯುಗವೆಂದರೆ – ಕಾಲಮಾನ – ಅಂದ್ರೆ ಹೊಸ ವರ್ಷ.. ಆದಿ ಎಂದರೆ ಆರಂಭ. ಯುಗಾದಿ ಹಬ್ಬ ಪೌರಾಣಿಕ ಹಾಗೂ ಐತಿಹಾಸಿಕ ವಿಶೇಷತೆ ದಿನವಾಗಿದೆ.
ಹೊಸ ವರ್ಷದ ಆರಂಭದ ದಿನವಾದ ಇಂದು ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದ್ರೆ ವರ್ಷಪೂರ್ತಿ ಒಳ್ಳೆಯ ದಿನಗಳು ಪ್ರಾಪ್ತಿಯಾಗಲಿವೆ ಎಂಬ ನಂಬಿಕೆ ಭಕ್ತರದ್ದಾಗಿದೆ. ಈ ಹಿನ್ನಲೆ ಯುಗಾದಿ ದಿನವಾದ ಇಂದು ಬೆಳಗ್ಗೆಯಿಂದ ದೇವಾಲಯಗಳಿಗೆ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಿದ್ದಾರೆ. ಶ್ರೀ ಶರಣ ಬಸವೇಶ್ವರ ದೇವಸ್ಥಾನ, ಕೋರಂಟಿ ಹನುಮಾನ ದೇವಸ್ಥಾನ, ಗಾಣಗಾಪೂರ ದತ್ತಾತ್ರೇಯ ದೇವಸ್ಥಾನ, ಘತ್ತರಗಿ ಭಾಗಮ್ಮ ದೇವಿ ದೇವಸ್ಥಾನ ಸೇರಿ ಅನೇಕ ಪ್ರಮುಖ ದೇವಸ್ಥಾನಗಳಲ್ಲಿ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಅಲಂಕಾರ ಮಾಡಲಾಗಿದೆ. ಹಸಿರು ತಳಿರು ತೋರಣ, ವಿದ್ಯುತ್ ದೀಪ ಅಲಂಕಾರ ಕೂಡಾ ಮಾಡಲಾಗಿದೆ.
ಶರಣಬಸವೇಶ್ವರ ದೇಗುಲದಲ್ಲಿ ಶರಣರ ದರ್ಶನಕ್ಕೆ ಅರ್ಧ ಕಿಲೋ ಮೀಟರ್ ಉದ್ದಕ್ಕೆ ಸರದಿ ಸಾಲಿನಲ್ಲಿ ನಿಂತಿದ್ದಾರೆ. ಎಲ್ಲಡೆ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ. ಕಳೆದೆರಡು ವರ್ಷ ಕೋವಿಡ್ ಕಾರಣದಿಂದ ಹಬ್ಬವನ್ನು ಸರಳವಾಗಿ ಆಚರಿಸಲಾಗಿತ್ತು. ಈ ಬಾರಿ ಕೋವಿಡ್ ಭೀತಿ ಇಲ್ಲದ ಕಾರಣ ಸಂಭ್ರಮದಿಂದ ಯುಗಾದಿ ಆಚರಣೆ ಕಂಡುಬರುತ್ತಿದೆ. ಬೆಲೆ ಏರಿಕೆ ನಡುವೆಯೂ ಹಬ್ಬಕ್ಕೆ ಬೇಕಾಗುವ ಎಲ್ಲಾ ಸಾಮಾಗ್ರಿಗಳನ್ನು ಜನ ಖರೀದಿ ಮಾಡಿದ್ದಾರೆ.
