ಪಶ್ಚಿಮ ಬಂಗಾಳ ರಾಜ್ಯ ಬದುಕಲು ಯೋಗ್ಯವಾಗಿಲ್ಲ: ರೂಪಾ ಗಂಗೂಲಿ

ಪಶ್ಚಿಮ ಬಂಗಾಳ ರಾಜ್ಯ ಬದುಕಲು ಯೋಗ್ಯವಾಗಿಲ್ಲ ಎಂದು ಬಿಜೆಪಿ ಸಂಸದೆ ರೂಪಾ ಗಂಗೂಲಿ ಕಣ್ಣೀರಿಟ್ಟಿದ್ದಾರೆ. ಪಶ್ಚಿಮ ಬಂಗಾಳದ ಬಿರ್ಭೂಮ್ ನಗರದಲ್ಲಿ ನಡೆದ ಎಂಟು ಮಂದಿಯ ಸಜೀವ ದಹನ ಪ್ರಕರಣ ಕುರಿತಂತೆ ರೂಪಾ ಗಂಗೂಲಿ ತಮ್ಮ ಅಸಮಧಾನ ಹೊರ ಹಾಕಿ ಕಣ್ಣೀರಿಟ್ಟಿದ್ದಾರೆ.
ರಾಜ್ಯಸಭೆಯಲ್ಲಿ ಮಾತನಾಡಿದ ರೂಪಾ ಗಂಗೂಲಿ, ಪಶ್ಚಿಮ ಬಂಗಾಳ ರಾಜ್ಯವು ಬದುಕಲು ಯೋಗ್ಯವಾಗಿಲ್ಲ. ಪಶ್ಚಿಮ ಬಂಗಾಳದಲ್ಲಿ ಜನರು ಸರ್ಕಾರದ ವಿರುದ್ಧ ಮಾತನಾಡುವಂತೆಯೇ ಇಲ್ಲ. ಸರ್ಕಾರವು ಕೊಲೆಗಡುಕರನ್ನು ರಕ್ಷಿಸುತ್ತಿದೆ. ಚುನಾವಣೆಯಲ್ಲಿ ಗೆದ್ದ ಬಳಿಕ ಸರ್ಕಾರವೊಂದು ಜನರನ್ನು ಸಾಯಿಸುವಂತಹ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಹೊರತುಪಡಿಸಿ ಬೇರೆ ಯಾವುದೇ ರಾಜ್ಯದಲ್ಲಿ ಇಲ್ಲ. ನಾವೆಲ್ಲರೂ ಮನುಷ್ಯ ಜೀವಿಗಳು, ನಾವು ಕಲ್ಲು ಹೃದಯದ ರಾಜಕಾರಣ ಮಾಡಲು ಸಾಧ್ಯವಿಲ್ಲ. ಅಲ್ಲಿ ಸಾಮೂಹಿಕ ಹತ್ಯೆಗಳು ನಡೆಯುತ್ತಿವೆ, ನಡೆಯುತ್ತಲೇ ಇರುತ್ತವೆ ಎಂದರು.
ಪಶ್ಚಿಮ ಬಂಗಾಳದಲ್ಲಿ ಸಭ್ಯ ಜನ ಬದುಕೋಕೆ ಆಗದೆ ರಾಜ್ಯ ಬಿಟ್ಟು ಪರರಾಜ್ಯಗಳಿಗೆ ವಲಸೆ ಹೋಗುತ್ತಿದ್ದಾರೆ. ಕೂಡಲೇ ಅಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು ಎಂದು ಮನವಿ ಮಾಡಿ ಭಾವುಕರಾದರು.
