ಪ್ರವಾಹ ಪೀಡಿತ ನದಿ ತೀರದ ನಿವಾಸಿಗಳಿಗೆ ಶಾಶ್ವತ ನಿವೇಶನ:8.22 ಎಕರೆ ಮೀಸಲು

ಕೊಡಗು: ಜಿಲ್ಲೆಯಲ್ಲಿ ಪ್ರತಿ ವರ್ಷ ಕಾವೇರಿ ನದಿ ಪ್ರವಾಹಕ್ಕೆ ಸಿಲುಕುವ ನದಿ ತೀರದ ನಿವಾಸಿಗಳಿಗೆ ಶಾಶ್ವತ ನಿವೇಶನ ಒದಗಿಸಲು ಅಭ್ಯತ್ಮಂಗಲ ಗ್ರಾಮದಲ್ಲಿ 8.22 ಎಕರೆ ಸರಕಾರಿ ಜಮೀನು ಕಾಯ್ದಿರಿಸಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ನೆಲ್ಲಿಹುದಿಕೇರಿ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಮಳೆಹಾನಿ ಸಂತ್ರಸ್ತರಿಗೆ ಹಂಚಿಕೆ ಮಾಡಲು ನಿವೇಶನಗಳನ್ನು ಗುರುತಿಸಿದ್ದರೂ ಇಂದಿಗೂ ಹಕ್ಕುಪತ್ರ ನೀಡದಿರಲು ಕಾರಣವೇನು ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸರಕಾರವನ್ನು ಪ್ರಶ್ನಿಸಿದ್ದರು.
ಇದಕ್ಕೆ ಸದನದಲ್ಲಿ ಉತ್ತರಿಸಿದ ವಸತಿ ಸಚಿವ ವಿ.ಸೋಮಣ್ಣ, ಕೊಡಗು ಜಿಲ್ಲೆಯ ನೆಲ್ಲಿಹುದಿಕೇರಿ, ವಾಲ್ಲೂರು ತ್ಯಾಗತ್ತೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ ನದಿ ದಡದ ಮನೆಗಳು ಕಾವೇರಿ ನದಿ ಪ್ರವಾಹಕ್ಕೆ ಒಳಪಡುತ್ತಿರುವುದು ಸರಕಾರದ ಗಮನಕ್ಕೆ ಬಂದಿದೆ.
ಇವರಿಗೆ ಶಾಶ್ವತ ನಿವೇಶನ ಅಥವಾ ಪುನರ್ವಸತಿ ಕಲ್ಪಿಸಲು 2019ರಲ್ಲಿ ಅಭ್ಯತ್ ಮಂಗಲದ ಸರ್ವೇ ನಂಬರ್ 87/2ರಲ್ಲಿ 8.22 ಎಕರೆ ಸರಕಾರಿ ಭೂಮಿಯನ್ನು ಕಾಯ್ದಿರಿಸಲಾಗಿದೆ. ಈ ಭೂಮಿಯನ್ನುಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಗಿದ್ದು, ಈ ಜಮೀನನ್ನು ಅಭಿವೃದ್ಧಿಪಡಿಸಿದ ನಂತರ ನಿವೇಶನ ಹಕ್ಕುಪತ್ರ ಹಂಚಿಕೆ ಮಾಡಲಾಗುತ್ತದೆ.
ಈ ಜಾಗಕ್ಕೆ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕಾಗಿದ್ದು, ಜಿಲ್ಲಾಧಿಕಾರಿಗಳ ಪ್ರಸ್ತಾವನೆ ಆಧರಿಸಿ ಜಮೀನು ಅಭಿವೃದ್ಧಿಗೆ 4.32 ಲಕ್ಷ ರೂ.ಗಳ ಅನುದಾನವನ್ನು ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಹಕ್ಕುಪತ್ರ ನೀಡಲು ಒಟ್ಟು 95 ಸಂತ್ರಸ್ಥರನ್ನು ಗುರುತಿಸಲಾಗಿದೆ ಎಂದು ಸಚಿವ ಸೋಮಣ್ಣ ಸದನಕ್ಕೆ ಮಾಹಿತಿ ನೀಡಿದ್ದಾರೆ.
