ದೇವಸ್ಥಾನದಿಂದ ಪ್ರಸಾದ ತರದ ಪತಿ, ನೇಣಿಗೆ ಶರಣಾದ ಪತ್ನಿ

ರಾಮನಗರ: ದೇವಸ್ಥಾನಕ್ಕೆ ಹೋದ ಪತಿ ದೇವಾಲಯದಿಂದ ಪ್ರಸಾದ ತರಲಿಲ್ಲ ಎಂಬ ಕಾರಣಕ್ಕೆ ಗಂಡನೊಂದಿಗೆ ಜಗಳವಾಡಿ ಮನನೊಂದಿದ್ದ ಗೃಹಣಿ ಎರಡು ತಿಂಗಳ ಹಸುಗೂಸು ಬಿಟ್ಟು ನೇಣಿಗೆ ಶರಣಾಗಿರುವ ಘಟನೆ ರಾಯರದೊಡ್ಡಿ ಬಡಾವಣೆಯಲ್ಲಿ ನಡೆದಿದೆ.
ಶ್ವೇತಾ ಮೃತ ಗೃಹಿಣಿ. ಕಳೆದ ಎಂಟು ವರ್ಷಗಳ ಹಿಂದೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದ ಶ್ವೇತಾ ಹಾಗೂ ಶಿವನಂಜ ಪ್ರೀತಿಸಿ ಮದುವೆಯಾಗಿದ್ದರು. ಕೆಲಸ ಅರಸಿ ರಾಮನಗರಕ್ಕೆ ಬಂದು ರಾಯರದೊಡ್ಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ದಂಪತಿಗೆ ಎರಡು ತಿಂಗಳ ಹಸುಗೂಸು ಸೇರಿದಂತೆ ನಾಲ್ಕು ಮಕ್ಕಳಿದ್ದಾರೆ.
ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಶಿವನಂಜ ಮತ್ತು ಶ್ವೇತಾ ನಡುವೆ ಸಣ್ಣ ಪುಟ್ಟ ವಿಷಯಕ್ಕೂ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಶಿವನಂಜ ಮಗನೊಂದಿಗೆ ಮಹದೇಶ್ವರ ಬೆಟ್ಟದ ದೇವಸ್ಥಾನಕ್ಕೆ ಹೋಗಿದ್ದರು. ವಾಪಸ್ ಮನೆಗೆ ಬರುವಾಗ ದೇವಾಲಯದಿಂದ ಪ್ರಸಾದ ತಂದಿಲ್ಲ ಎಂಬ ಒಂದೇ ಕಾರಣಕ್ಕೆ ಶಿವನಂಜನೊಂದಿಗೆ ಶ್ವೇತಾ ಜಗಳವಾಡಿದ್ದಾಳೆ. ಇದ್ರಿಂದ ಕೋಪಗೊಂಡ ಶ್ವೇತಾ ಗಂಡನನ್ನು ಭಯಪಡಿಸಲು ಆತ್ಮಹತ್ಯೆಗೆ ಮುಂದಾಗಿದ್ದು ಈ ವೇಳೆ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ.
ಬೇಕರಿಯೊಂದರಲ್ಲಿ ಕೆಲಸಕ್ಕೆ ಮಾಡುತ್ತಿದ್ದ ಶಿವನಂಜ ತುಂಬಾ ಕಷ್ಟ ಪಟ್ಟು ಸಂಸಾರ ತೂಗಿಸುತ್ತಿದ್ದ. ಶ್ವೇತಾ ಮತ್ತು ಶಿವನಂಜ ಪ್ರೇಮ ವಿವಾಹವಾದ ಕಾರಣ ಶಿವನಂಜ ತನ್ನ ತಂದೆ ತಾಯಿಯಿಂದ ದೂರವಿದ್ದಾನೆ. ಶ್ವೇತಾಳ ತಾಯಿ ಕಡು ಬಡವಾರಗಿದ್ದು, ಆಕೆಗೆ ಕಣ್ಣು ಕಾಣವುದಿಲ್ಲ. ಶವ ಕೊಂಡಯ್ಯಲ್ಲೂ ಹಣ ಇಲ್ಲದ್ದನ್ನು ಮನಗಂಡ ರಾಯರದೊಡ್ಡಿ ಬಡವಾಣೆಯ ಜನರೇ ಚಂದಾ ಎತ್ತಿ ಪೋಲಿಸರ ನೆರವಿನೊಂದಿಗೆ ಶ್ವೇತಾಳ ಶವವನ್ನು ಸಾಗಿಸಲು ನೆರವಾಗಿದ್ದಾರೆ.
ಒಟ್ನಲ್ಲಿ ಅಪ್ಪ, ಅಮ್ಮನ ಜಗಳದಿಂದ ಕೂಸು ಬಡವಾಯ್ತು ಅನ್ನೋ ಹಾಗಾಗಿದೆ. ಇನ್ನು ಶಿವನಂಜ ಕುಡಿತದ ಚಟ ಅಂಟಿಸಿಕೊಂಡಿದ್ದು ನಾಲ್ಕು ಮಕ್ಕಳ ಭವಿಷ್ಯ ಅತಂತ್ರವಾಗಿದೆ.
