ಕಲಬುರಗಿ ಶರಣರ ಜಾತ್ರೆಗೆ ಜನವೋ ಜನ!

ಕಲಬುರಗಿ: ಕೋವಿಡ್ ಕಾರಣಕ್ಕೆ ಎರಡು ವರ್ಷದಿಂದ ನಡೆಯದ ಕಲ್ಯಾಣ ಕರ್ನಾಟಕ ಜನತೆಯ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರರ ಜಾತ್ರಾ ಮಹೋತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
8 ನೇ ಪೀಠಾಧೀಪತಿ ಡಾ. ಶರಣಬಸವಪ್ಪ ಅಪ್ಪ ಅವರ ಸಾನಿಧ್ಯದಲ್ಲಿ 9 ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಸಾರಥ್ಯದಲ್ಲಿ ಶ್ರೀ ಶರಣ ಬಸವೇಶ್ವರರ 200ನೇ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು. ಇಂದು ಸಾಯಂಕಾಲ 6 ಗಂಟೆಗೆ ಭವ್ಯ ರಥದಲ್ಲಿ ಸ್ವಾಮಿಯ ಮೆರವಣಿಗೆ ನೆರವೇರಲಿದೆ. ಚಿ. ಅಪ್ಪಾ ಅವರು ಪುರುಷ ಬಟ್ಟಲು ಪ್ರದರ್ಶನ ಮಾಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.
ಬೆಳಿಗ್ಗೆಯಿಂದಲೇ ಶರಣ ಬಸವಣ್ಣನ ದರ್ಶನಕ್ಕೆ ಜನರ ದಂಡು ಆಗಮಿಸುತ್ತಿದೆ. ಸರದಿ ಸಾಲಿನಲ್ಲಿ ನಿಂತು ಶರಣಬಸವೇಶ್ವರರ ದರ್ಶನ ಪಡೆಯುತ್ತಿದ್ದಾರೆ. ವಿಶೇಷ ತ್ರೀಕಾಲ ಪೂಜೆ ನೆರವೇರುತ್ತಿದೆ. ಜಾತ್ರಾ ಮಹೋತ್ಸದ ಹಿನ್ನಲೆ ವಿಶೇಷ ಅಲಂಕಾರದಿಂದ ಶರಣಬಸವೇಶ್ವರರ ಮೂರ್ತಿ ಕಂಗೊಳಿಸುತ್ತಿದೆ. ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಅಲಂಕಾಲ ಮಾಡಲಾಗಿದೆ.
ರಥೋತ್ಸವಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ದೂರದ ಧಾರವಾಡ, ಬೆಳಗಾವಿ, ಗದಗ, ವಿಜಯಪುರ ಸೇರಿದಂತೆ ನೆರೆರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂದ್ರಪ್ರದೇಶದಿಂದಲೂ ಭಕ್ತರ ದಂಡು ಆಗಮಿಸುತ್ತಿದೆ. ಗ್ರಾಮೀಣ ಪ್ರದೇಶದಿಂದ ಶರಣನ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿ ಹರಕೆ ಪೂರೈಸುತ್ತಿದ್ದಾರೆ.
