ಸಡಗರದ ಶರಣರ ಜಾತ್ರೆ: ಸಂಭ್ರಮದಿಂದ ಉಚ್ಚಾಯಿ ಎಳೆದ ಭಕ್ತ ಸಾಗರ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರರ 200ನೇ ಜಾತ್ರಾ ಮಹೋತ್ಸವ ಅಂಗವಾಗಿ ಸಡಗರ ಸಂಭ್ರಮದ ಸಹಸ್ರಾರು ಭಕ್ತರು ಉಚ್ಚಾಯಿ (ಸಣ್ಣ ತೇರು) ಎಳೆದು ಭಕ್ತಿ ಸಮರ್ಪಿಸಿದರು.
ಶರಣನ ಭಕ್ತರು ಶ್ರದ್ಧಾ ಮತ್ತು ಭಕ್ತಿಪೂರ್ವಕವಾಗಿ ಶರಣಬಸವೇಶ್ವರ ಮಹಾರಾಜ ಕೀ ಜೈ ಘೋಷದೊಂದಿಗೆ ಅದ್ಧೂರಿ ಉಚ್ಛಾಯಿ ಎಳೆದು, ಕುಂಭ ಮೆರವಣಿಗೆ ನಡೆಸಲಾಯಿತು. ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಸೇರಿದಂತೆ ನಾಡಿನ ಮೂಲೆ ಮೂಲೆಯಿಂದ ಸದ್ಭಕ್ತರು ಆಗಮಿಸಿ ಭಕ್ತಿ ಮೆರೆದರು.
ಬೆಳಗ್ಗೆಯಿಂದಲೇ ತ್ರಿಕಾಲ ಪೂಜೆ, ಸಕಲ ಪೂಜಾ ವಿಧಿ ವಿಧಾನಗಳು ನೆರವೇರಿಸಿ ಶ್ರೀ ಶರಣಬಸವೇಶ್ವರ ಸಂಸ್ಥಾನದ ಸಂಪ್ರದಾಯದಂತೆ ಉಚ್ಛಾಯಿ ಎಳೆಯಲಾಯಿತು. ಭಕ್ತರು ಬಾಳೆಹಣ್ಣು, ಉತ್ತುತ್ತಿ, ತೆಂಗಿನ ನಾರು ಎಸೆದು ಇಷ್ಟಾರ್ಥ ಪೂರೈಸಿದರು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ ಪರಮ ಪೂಜ್ಯ ಡಾ. ಶರಣಬಸವಪ್ಪ, ಒಂಬತ್ತನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ, ಮಾತೋಶ್ರೀ ದಾಕ್ಷಾಯಿಣಿ, ಶರಣಬಸವೇಶ್ವರ ಸಂಸ್ಥಾನದ ಲಿಂಗರಾಜ್, ಶರಣಬಸವ ವಿವಿ ಕುಲಪತಿ ಡಾ. ನಿರಂಜನ ನಿಷ್ಠಿ, ಬಸವರಾಜ್ ದೇಶಮುಖ ಸಾನಿಧ್ಯ ವಹಿಸಿದ್ದರು.




