ಹಿಂದಿ ಸಿನಿಮಾವೊಂದು ನಮ್ಮೆಲ್ಲರನ್ನು ಕೊಲ್ಲುತ್ತಿದೆ: ನೋವು ತೋಡಿಕೊಂಡ ನಿರ್ದೇಶಕ

ಪರಭಾಷೆಯ ಕೆಲವೊಂದು ಸಿನಿಮಾಗಳು ತೆರೆಗೆ ಬಂದಾಗ ನಮ್ಮ ಭಾಷೆಯ ಸಿನಿಮಾಗಳಿಗೆ ನಮ್ಮ ನೆಲದಲ್ಲಿ ಥಿಯೇಟರ್ ಸಿಗೋದಿಲ್ಲ ಎಂದು ಈಗಾಗ್ಲೆ ಸಾಕಷ್ಟು ಭಾರಿ ಚಿತ್ರರಂಗದ ಕಲಾವಿದರು ನೋವು ತೋಡಿಕೊಂಡಿದ್ದರು. ಬೇರೆ ಭಾಷೆಯ ದೊಡ್ಡ ದೊಡ್ಡ ಸಿನಿಮಾಗಳು ಇಲ್ಲಿನ ಸ್ಮಾಲ್ ಸ್ಕ್ರೀನ್ ಗಳನ್ನ ಕಸಿದುಕೊಳ್ಳುತ್ತಿವೆ ಎಂದ ಆರೋಪಗಳು ಕೇಳಿ ಬಂದಿವೆ. ಇದೀಗ ಹಿಂದಿ ಭಾಷೆಯ ಸಿನಿಮಾವೊಂದರಿಂದ ಕನ್ನಡ ಚಿತ್ರಕ್ಕೆ ಅನ್ಯಾಯವಾಗುತ್ತಿದೆ ಎಂದು ನಿರ್ದೇಶಕರು ಅಸಮಾಧಾನ ಹೊರ ಹಾಕಿದ್ದಾರೆ,
ಮಾರ್ಚ್ 11ರಂದು ರಿಲೀಸ್ ಆದ ಹರೀಶ ವಯಸ್ಸು 36 ಸಿನಿಮಾ ಥಿಯೇಟರ್ ಸಿಗದೆ ಸಮಸ್ಯೆ ಎದುರಿಸುತ್ತಿದೆ ಎಂದು ಚಿತ್ರದ ನಿರ್ದೇಶಕ ಗುರುರಾಜ್ ಜೇಷ್ಠ ವಿಡಿಯೋ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ.
ಮಾರ್ಚ್ 11ರಂದು ಬಿಡುಗಡೆಯಾದ ಹರೀಶ ವಯಸ್ಸು 36 ಸಿನಿಮಾ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹಲವು ಪ್ರದರ್ಶನಗಳನ್ನ ನೀಡಿ ಗೆದ್ದಿದೆ. ಮಂಗಳೂರಿನ ಮಾಲ್ ನಲ್ಲಿ ಹೌಸ್ ಫುಲ್ ಆಗಿದ್ದು ಮತ್ತೊಂದು ಮಲ್ಟಿಪ್ಲೆಕ್ಸ್ ಗೆ ಬಂದಿದ್ದೇವೆ. ಚಿತ್ರ ಭಾನುವಾರ ಹೌಸ್ ಫುಲ್ ಪ್ರದರ್ಶನ ಕಂಡಿದ್ದು ಸೋಮವಾರಿ 50 ಸೀಟುಗಳು ಭರ್ತಿಯಾಗಿವೆ. ಇಂದಿನಿಂದ (ಮಂಗಳವಾರ) ಯಾವುದೇ ಶೋಗಳು ನಮ್ಮ ಸಿನಿಮಾಗಿಲ್ಲ.ಕಾರಣ ಹಿಂದಿ ಸಿನಿಮಾ ರಿಲೀಸ್ ಆಗಿದ್ದು ಅದು ನಮ್ಮೆಲ್ಲರನ್ನು ಕೊಲ್ಲುತ್ತಿದೆ ಎಂದರು.
ಬಿಡುಗಡೆ ಆಗಿರೋ ಆ ಹಿಂದಿ ಚಿತ್ರವನ್ನು ಎಲ್ಲರೂ ನೋಡಿ, ಅದರ ಬಗ್ಗೆ ನಮ್ಮದು ಎರಡು ಮಾತಿಲ್ಲ. ಆದರೆ ನಿರ್ಮಾಪಕರು ಹಾಕಿದ ದುಡ್ಡಿಗೆ ಕನ್ನಡದ ಜನತೆ ಎಷ್ಟೇ ಕಷ್ಟಪಟ್ಟರೂ ಹಣ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ನಿರ್ಮಾಪಕರು ಇನ್ನು ಮುಂದೆ ಕನ್ನಡ ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮೂಡಿದ್ದು, ಇದು ಬಹಳ ಬೇಸರದ ಸುದ್ದಿ ಎಂದು ನಿರ್ದೇಶಕರು ನೋವು ತೋಡಿಕೊಂಡಿದ್ದಾರೆ.
ನಮ್ಮ ಚಿತ್ರಕ್ಕೆ ನಟ ಪುನೀತ್ ರಾಜ್ ಕುಮಾರ್ ಟೈಟಲ್ ಸಾಂಗ್ ಹಾಡಿದ್ದಾರೆ. ಪುನೀತ್ ಹಾಡಿರುವ ಸಿನಿಮಾಗೆ ನಮ್ಮ ನೆಲದಲ್ಲಿ ವೇದಿಕೆ ಇಲ್ಲವೆ ಎಂದು ವಿಡಿಯೋ ಮೂಲಕ ಬೇಸರ ಹೊರಹಾಕಿದ್ದಾರೆ.
