2023ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರುತ್ತೆ: ಎನ್ ಹೆಚ್ ಕೋನರೆಡ್ಡಿ ಭವಿಷ್ಯ

ಧಾರವಾಡ: ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಪಂಚರಾಜ್ಯ ಚುನಾವಣೆಯ ಫಲಿತಾಂಶಗಳು ಏನಾಗುತ್ತದೆ ಎಂಬುದು ಗೊತ್ತಿಲ್ಲ. ಈಗ ಚುನಾವಣೆ ನಡೆದ ಐದು ರಾಜ್ಯಗಳಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೋ ಗೊತ್ತಿಲ್ಲ. ಆದರೆ ಮುಂಬರುವ ಕರ್ನಾಟಕ ರಾಜ್ಯ 2023 ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಭವಿಷ್ಯ ನುಡಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ಚುನಾವಣೆ ನಡೆಯುತ್ತಿರುವ ಪಂಚರಾಜ್ಯಗಳ ಅಧಿಕಾರ ಹಿಡಿಯುತ್ತೆ ಎಂಬುವುದು ಈಗಲೇ ಹೇಳುವುದಕ್ಕೆ ಬರುವುದಿಲ್ಲ. ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಎಸ್ಪಿ ಪಕ್ಷಗಳ ನಡುವೆ ನೇರ ಫೈಟ್ ಇದೆ. ಅಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರುತ್ತೋ ಗೊತ್ತಿಲ್ಲ. ಪ್ರತಿ ಚುನಾವಣಾ ಸಮಯದಲ್ಲೂ ಸಮೀಕ್ಷಾ ವರದಿಗಳು ಬರುತ್ತವೆ. ಇಂತಹ ಹಲವು ಸಮೀಕ್ಷಾ ವರದಿಗಳನ್ನು ಬಹಳಷ್ಟು ನೋಡಿದ್ದೇವೆ. ಆದರೆ ಮುಂದಿನ ವರ್ಷ ಜರುಗುವ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಣ್ಣಿಗೇರಿ ಪುರಸಭೆ ಅಧ್ಯಕ್ಷರ, ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ನಿರ್ಲಕ್ಷ.
ಅಣ್ಣಿಗೇರಿ ಪುರಸಭೆಯ ಚುನಾವಣೆ ನಡೆದು ಹಲವು ತಿಂಗಳಾಗಿದ್ದು, ಪುರಸಭೆಗೆ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆ ಘೋಷಣೆ ಆಗುತ್ತಿಲ್ಲ. ಇದರ ಹಿಂದೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇದು ಸರಿಯಾದ ನಡೆಯಲ್ಲ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಲ್ಲದೆ ಹಲವು ಅಭಿವೃದ್ಧಿ ಕಾರ್ಯಗಳು ಈಗ ನಿಂತು ಹೋಗಿವೆ. ಹಾಗಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ರಾಜ್ಯ ಸರ್ಕಾರ ಕೂಡಲೇ ದಿನಾಂಕ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಪುರಸಭೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದಿಂದ 12 ಅಭ್ಯರ್ಥಿಗಳು ಗೆಲ್ಲುವು ಸಾಧಿಸಿದ್ದಾರೆ. ಇವರೊಂದಿಗೆ ಇಬ್ಬರು ಪಕ್ಷೇತರರು ಕೂಡ ನಮ್ಮ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಹಿಂದೆಟು ಹಾಕುತ್ತಿರಬಹುದು ಎಂಬ ಅನುಮಾನ ನಮಗೆ ಕಾಡುತ್ತಿದೆ. ಆದರೆ ಇದನ್ನು ನಮ್ಮ ಕಾಂಗ್ರೆಸ್ ಪಕ್ಷ ಸಹಿಸುವುದಿಲ್ಲ. ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯ ಘೋಷಣೆಯನ್ನು ರಾಜ್ಯ ಸರ್ಕಾರ ಘೋಷಣೆ ಮಾಡದಿದ್ದಲ್ಲಿ, ನವಲಗುಂದದಿಂದ ಅಣ್ಣಿಗೇರಿಯವರೆಗೆ ಪಾದಯಾತ್ರೆ ಕೈಗೊಂಡು ಸರ್ಕಾರದ ಬೇಜವಾಬ್ದಾರಿಯನ್ನು ಜನರಿಗೆ ತಿಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
