ಮಾತುಕತೆ ಮೂಲಕ ಮೇಕೆದಾಟು ವಿವಾದ ಬಗೆಹರಿಸಿಕೊಳ್ಳಲಿ: ಗಜೇಂದ್ರ ಸಿಂಗ್ ಶೇಖಾವತ್

ಕರ್ನಾಟಕ ಹಾಗೂ ತಮಿಳುನಾಡು ಎರಡೂ ರಾಜ್ಯಗಳು ಕೂತು ಮಾತನಾಡಿ ಮೇಕೆದಾಟು ವಿವಾದವನ್ನು ಬಗೆಹರಿಸಿಕೊಳ್ಳಲಿ. ಎರಡೂ ರಾಜ್ಯಗಳೇ ಮಾತುಕತೆ ನಡೆಸಿದರೆ ಯೋಜನೆ ಆರಂಭವಾಗುತ್ತದೆ. ಈ ಬಗ್ಗೆ ಮಾತುಕತೆ ನಡೆಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಿದ್ದ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ.
ನನಗೆ ಮೇಕೆದಾಟು ಯೋಜನೆ ಆಗಲಿ ಎಂಬ ಆಶಯವಿದೆ. ಆದರೆ ನ್ಯಾಯಾಲಯದಲ್ಲಿ ಪ್ರಕರಣ ಇರುವ ಕಾರಣ ಹೆಚ್ಚು ಮಾತನಾಡುವುದಿಲ್ಲ. ಎರಡೂ ರಾಜ್ಯಗಳೂ ಕುಳಿತು ಮಾತುಕತೆ ನಡೆಸಿ ಬಗೆಹರಿಸಿಕೊಳ್ಳುವುದೇ ಈ ಪ್ರಕರಣದ ಅಂತ್ಯಕ್ಕೆ ದಾರಿ ಎಂದಿದ್ದಾರೆ.
ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳ ನಡುವೆ ಕೂಡ ಇದೇ ರೀತಿ ಸಮಸ್ಯೆ ಇತ್ತು. ಆ ಎರಡೂ ರಾಜ್ಯಗಳ ನಡುವೆ ಕೆನ್ ಬೆತ್ವಾ ನದಿ ಜೋಡಣೆ ಸಮಸ್ಯೆ ಇತ್ತು. ಬಳಿಕ ಮಾತು ಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡಿದ್ದವು. ಅದೇ ರೀತಿ ಮೇಕೆದಾಟು ವಿಚಾರದಲ್ಲೂ ಮಾತುಕತೆ ಮೂಲಕ ವಿವಾದವನ್ನು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಬಗೆಹರಿಸಿಕೊಳ್ಳಲಿ. ಭಾರತದ ಕೊನೆಯ ವ್ಯಕ್ತಿಗೂ ಕೂಡ ಕುಡಿಯುವ ನೀರು ಸಿಗುವ ರೀತಿಯಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದರು.
