ಉಕ್ರೇನ್ ನಲ್ಲಿ ಸಿಲುಕಿದ ಕಲಬುರಗಿ ವಿದ್ಯಾರ್ಥಿ ಮನೆಗೆ ಶಾಸಕ ದತ್ತಾತ್ರೇಯ ಪಾಟೀಲ್ ಭೇಟಿ

ಕಲಬುರಗಿ: ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿ ಮನೆಗೆ ತೆರಳಿದ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಪೋಷಕರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.
ಕಲಬುರಗಿಯ ಭಾಗ್ಯವಂತಿ ನಗರ ನಿವಾಸಿ ಮಲ್ಲಿನಾಥ ಜಾಮಗೊಂಡ ಮನೆಗೆ ಭೇಟಿ ನೀಡಿ, ಮಲ್ಲಿನಾಥ ಅವರ ತಂದೆ ಅರವಿಂದ ಜಾಮಗೊಂಡ ಅವರೊಂದಿಗೆ ಅಲ್ಲಿನ ಪರಿಸ್ಥಿತಿ ಕುರಿತು ಸಮಾಲೋಚನೆ ನಡೆಸಿದರು.
ಉಕ್ರೇನ್ ನ ಖಾರ್ಕೀವ್ ನಲ್ಲಿ ಎಂಬಿಬಿಎಸ್ ಓದುತ್ತಿರುವ ಮಲ್ಲಿನಾಥ ಜಾಮಗೊಂಡ ರಷ್ಯಾ ಹಾಗೂ ಉಕ್ರೇನ್ ಯುದ್ದದಲ್ಲಿ ಸಿಲುಕಿದ್ದು ಅವರ ಪೋಷಕರು ಆತಂಕದಲ್ಲಿದ್ದಾರೆ. ಹೀಗಾಗಿ ವಿದ್ಯಾರ್ಥಿ ಮಲ್ಲಿನಾಥ ಮನೆಗೆ ತೆರಳಿ ಫೋನ್ ಮೂಲಕ ಮಾತನಾಡಿದರು. ಸಾಧ್ಯವಾದಷ್ಟು ಸುರಕ್ಷಿತ ಸ್ಥಳಗಳಲ್ಲಿ ಇರಲು ಪ್ರಯತ್ನಿಸಿ. ಆದಷ್ಟು ಬೇಗ ನಿಮ್ಮನ್ನು ಕರೆ ತರುವ ಕಾರ್ಯ ನಡೆಯುತ್ತಿದೆ. ಈ ಕುರಿತು ಸಿಎಂ ಹಾಗೂ ಕೇಂದ್ರ ಸಚಿವರ ಜೊತೆ ಚರ್ಚಿಸುತ್ತೇನೆ. ಉಕ್ರೇನ್ ನಿಂದ ಭಾರತಿಯರನ್ನ ಕರೆತರುವ ಪ್ರಯತ್ನ ಪ್ರಧಾನಿ ಮೋದಿ ಮಾಡುತ್ತಿದ್ದಾರೆಂದು ಮಲ್ಲಿನಾಥಗೆ ಧೈರ್ಯ ಹೇಳಿದರು.
ಆತಂಕದಲ್ಲಿ ಪೊಷಕರು :
ಮಗನ ಬರುವಿಕೆಯನ್ನು ಎದುರು ನೋಡುತ್ತಿರುವ ಪೋಷಕರು ಮಾಧ್ಯಮಗಳ ಮುಂದೆ ಆತಂಕ ವ್ಯಕ್ತಪಡಿಸಿದ್ದಾರೆ. ಅರವಿಂದ ಜಾಮಗೊಂಡ ಅಳಲನ್ನು ತೋಡಿಕೊಂಡಿದ್ದಾರೆ. ಉಕ್ರೇನ್ ನಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಸಹಕಾರ ಸಹಾಯ ಸಿಗುತ್ತಿಲ್ಲ. ಮಕ್ಕಳು ನಿನ್ನೆ 12 ಕಿ.ಮೀ ನಡೆದುಕೊಂಡು ಹೋಗದ್ದಾರೆ.
ಸದ್ಯ ನಡೆದುಕೊಂಡೆ ಹೋಗಿ ಸುರಕ್ಷಿತ ಸ್ಥಳಕ್ಕೆ ತಲುಪಿದ್ದಾರೆ. ರೈಲು ನಿಲ್ದಾಣಕ್ಕೆ ಹೋದರು ಅಲ್ಲಿನ ಸ್ಥಳೀಯರು ರೈಲು ಹತ್ತಲು ಬಿಡುತ್ತಿಲ್ಲ. ಹೀಗಾಗಿ ಬೇರೆ ಸುರಕ್ಷಿತ ಜಾಗದಲ್ಲಿ ವಾಸ್ತವ ಮಾಡಿದ್ದಾನೆ. ರಾಯಭಾರಿ ಕಚೇರಿಯವರು ಯಾರು ಸಹಾಯ ಮಾಡುತ್ತಿಲ್ಲ, ಪೋನ್ ಮಾಡಿದ್ರು ರಿಸಿವ್ ಮಾಡುತ್ತಿಲ್ಲ. ಹೀಗಾಗಿ ಮಕ್ಕಳನ್ನು ಸುರಕ್ಷಿತವಾಗಿ ಕರೆತರಲು ಇನ್ನಷ್ಟು ವ್ಯವಸ್ಥೆ ಮಾಡಬೇಕು ಎಂದು ಅರವಿಂದ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
