ಕಾಂಗ್ರೆಸ್ ಪಾದಯಾತ್ರೆ: ಬೆಂಗಳೂರಿನ ಜನತೆಗೆ ಸಂಕಷ್ಟ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಕಾಂಗ್ರೆಸ್ ಪಕ್ಷ ತನ್ನ ರಾಜಕೀಯ ಹಿತಾಸಕ್ತಿಗೆ ಇಡೀ ಬೆಂಗಳೂರು ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದೆ. ಇವರ ಪಾದಯಾತ್ರೆಯಿಂದ ಬೆಂಗಳೂರಿಗೆ ಏನೂ ಅನುಕೂಲವಾಗುವುದಿಲ್ಲ. ಬದಲಿಗೆ ಸಂಕಷ್ಟವೇ ಹೆಚ್ಚು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಂಗಳವಾರ ಅವರು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಮೇಕೆದಾಟು ಯೋಜನೆಗೆ ಕುರಿತು ಸರ್ಕಾರವನ್ನು ಒತ್ತಾಯಿಸಲು ಕಾಂಗ್ರೆಸ್ ಗೆ ಯಾವುದೇ ನೈತಿಕ ಹಕ್ಕಿಲ್ಲ ಎಂದರು.
ಸಂಚಾರ ದಟ್ಟಣೆ
ಕಾಂಗ್ರೆಸ್ ಸ್ವಾತಂತ್ರ್ಯ ಉದ್ಯಾನವನ ದಲ್ಲಿ ಪ್ರತಿಭಟನೆ, ಭಾಷಣ ಮಾಡಿ ತೆರಳಬಹುದಿತ್ತು. ಬೆಂಗಳೂರಿನಲ್ಲಿ ಮೂರು ದಿನ ಎಲ್ಲಾ ದಿಕ್ಕಿನಲ್ಲಿ ಪಾದಯಾತ್ರೆ ಮಾಡುವ ಮೂಲಕ ಸಂಚಾರ ದಟ್ಟಣೆ ಉಂಟುಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಯಾವುದೋ ಒಂದು ಕಡೆ ಸಂಚಾರ ದಟ್ಟಣೆ ಯಾದರೆ ಅದರ ಪರಿಣಾಮ ಎಲ್ಲಾ ಕಡೆ ಆಗುತ್ತದೆ. ಇದರ ಅರಿವಿದೆ ಅವರಿಗೆ. ಆದರೂ ತಮ್ಮ ರಾಜಕೀಯ ಹಿತಾಸಕ್ತಿಗೆ ಇಡೀ ಬೆಂಗಳೂರು ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತಿದ್ದಾರೆ. ಇವರ ಪಾದಯಾತ್ರೆಯಿಂದ ಬೆಂಗಳೂರಿಗೆ ಏನೂ ಅನುಕೂಲವಾಗುವುದಿಲ್ಲ. ಬದಲಿಗೆ ಸಂಕಷ್ಟವೇ ಹೆಚ್ಚು ಎಂದು ಸಿಎಂ ಅಭಿಪ್ರಾಯಪಟ್ಟರು
ಸರ್ಕಾರ ಮೇಕೆದಾಟು ಯೋಜನೆಗೆ ಬದ್ಧ
ಸರ್ಕಾರ ಮೇಕೆದಾಟು ಯೋಜನೆಗೆ ಬದ್ಧವಾಗಿದೆ. ತಮ್ಮ ಕಾಲದಲ್ಲಿ ಯಾವ ಯೋಜನೆಗಳನ್ನು ಮಾಡಲಾಗಿಲ್ಲದವುಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಪಾದಯಾತ್ರೆ, ಧರಣಿ ಮಾಡುತ್ತಿದೆ. ತಮ್ಮ ಕಾಲದಲ್ಲಿ ಮೇಕೆದಾಟು ಯೋಜನೆಗೆ ಡಿಪಿಆರ್ ಸಹ ಮಾಡಿಲ್ಲ. ಈಗ ಕೂಡಲೇ ಅದರ ಕಾಮಗಾರಿ ಪ್ರಾರಂಭ ಮಾಡಿ ಎಂದು ಒತ್ತಾಯಿಸುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಕಾಲದಲ್ಲಿ ವಿಪಕ್ಷಗಳನ್ನು ಹತ್ತಿಕ್ಕಲಾಗಿದೆ
ಕಾಂಗ್ರೆಸ್ ಪಕ್ಷದವರು ಅಧಿಕಾರಾದಲ್ಲಿದ್ದಾಗ ವಿರೋಧಪಕ್ಷದವರ ಮೇಲೆ ಎಷ್ಟು ಕೇಸ್ ಗಳನ್ನು ಹಾಕಿದ್ದಾರೆ. ಎಷ್ಟು ಲಾಠಿ ಚಾರ್ಚ್ ಮಾಡಿದ್ದಾರೆ. ವಿರೋಧಪಕ್ಷದವರನ್ನು ಹತ್ತಿಕ್ಕುವ ಕೆಲಸವನ್ನು ದೊಡ್ಡ ಪ್ರಮಾಣದಲ್ಲಿ ಕಾಂಗ್ರೆಸ್ ಮಾಡಿದೆ. ಅದನ್ನು ಅವರು ನೆನಪುಮಾಡಿಕೊಳ್ಳಲಿ. ಕಾನೂನು ತನ್ನ ಕೆಲಸವನ್ನು ಮಾಡಿದಾಗ ವಿಪರೀತವಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು.
ಒಂದು ಜವಾಬ್ದಾರಿಯುತ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಅದೇ ರೀತಿ ಕಾನೂನಿನ ಅನ್ವಯವೂ ಕೆಲಸ ಮಾಡಲು ಅವಕಾಶವಿದೆ. ಇದರ ವಾಸ್ತವಾಂಶವನ್ನು ಅರ್ಥಮಾಡಿಕೊಳ್ಳದೆ ಈ ಹೇಳಿಕೆ ಕೊಡುತ್ತಿರುವುದು ಕಾಂಗ್ರೆಸ್ ಪಕ್ಷ ಎಷ್ಟರಮಟ್ಟಿಗೆ ರಾಜಕಾರಣದ ಸಲುವಾಗಿ ತಳಮಟ್ಟಕ್ಕೆ ಹೋಗಿದೆ ಎನ್ನುವುದನ್ನು ತಿಳಿಸುತ್ತದೆ ಹಾಗೂ ಅಧಿಕಾರ ಹಿಡಿಯಲು ಅತ್ಯಂತ ಹತಾಶವಾಗಿದೆ ಎಂದರು.
