ಹರ್ಷ ಕುಟುಂಬಕ್ಕೆ 5 ಲಕ್ಷ ಧನಸಹಾಯ ಮಾಡಿದ ಧ್ರುವ ಸರ್ಜಾ

ಬಜರಂಗದಳ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಸಂಬಂಧ ಹರ್ಷ ಕುಟುಂಬಕ್ಕೆ ಸಾಂತ್ವಾನ ಹೇಳಲು ಸಾಕಷ್ಟು ಮಂದಿ ಹರ್ಷ ಮನೆಗೆ ಆಗಮಿಸಿದ್ದಾರೆ. ಈಗಾಗ್ಲೆ ಕೆಲ ರಾಜಕೀಯ ನಾಯಕರು ಹರ್ಷ ಕುಟುಂಬಕ್ಕೆ ಆರ್ಥಿಕವಾಗಿ ಸಹಾಯ ಮಾಡಿದ್ದು ಇದೀಗ ಸ್ಯಾಂಡಲ್ವುಡ್ ನಟರೊಬ್ಬರು ಹರ್ಷ ಕುಟುಂಬಕ್ಕೆ ಸಹಾಯ ಹಸ್ತ ಚಾಚಿದ್ದಾರೆ.
ಇತ್ತೀಚೆಗೆ ನಟ ಪ್ರಥಮ್ ಹರ್ಷ ಕುಟುಂಬಕ್ಕೆ 25 ಸಾವಿರ ಧನ ಸಹಾಯ ಮಾಡಿದ್ದರು. ಅಲ್ಲದೆ ಸದ್ಯದ ಪರಸ್ಥಿತಿಯಲ್ಲಿ ನನಲ್ಲಿರುವುದು ಇಷ್ಟೇ ಹಣ. ನಟಭಯಂಕರ ಸಿನಿಮಾ ರಿಲೀಸ್ ಆದ ಬಳಿಕ ಮತ್ತಷ್ಟು ಹಣ ನೀಡುವುದಾಗಿ ಭರವಸೆ ನೀಡಿದ್ದರು. ಈ ಮಧ್ಯೆ ಪ್ರಥಮ್ ಕುಟುಂಬಕ್ಕೆ ಸ್ಯಾಂಡಲ್ವುಡ್ ನಟರೊಬ್ಬರು ಹಣ ನೀಡಿದ್ದು ಆ ಬಗ್ಗೆ ಹೇಳುವುದಾಗಿ ಪ್ರಥಮ್ ಹೇಳಿದ್ದರು. ಇದೀಗ ಪ್ರಥಮ್ ಆ ನಟ ಯಾರು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಹರ್ಷ ನಿವಾಸಕ್ಕೆ ಪ್ರಥಮ್ ಭೇಟಿ ನೀಡೋ ವಿಚಾರ ತಿಳಿದ ನಟ ಧ್ರುವ ಸರ್ಜಾ ತಮ್ಮ ಕಡೆಯಿಂದ ಹರ್ಷ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಸಹಾಯ ಧನ ನೀಡಿದ್ದಾರಂತೆ. ಅಲ್ಲದೇ ಹರ್ಷ ಕುಟುಂಬಕ್ಕೆ ತನ್ನ ಕಡೆಯಿಂದ ಏನಾದ್ರು ಸಹಾಯ ಬೇಕಾಗಿದ್ದರೆ ತಿಳಿಸುವಂತೆ ಹೇಳಿದ್ದಾಗಿ ನಟ ಪ್ರಥಮ್ ಹೇಳಿದ್ದಾರೆ.
ಹರ್ಷ ಅವರನ್ನು ವಾಪಸ್ ತಂದುಕೊಡಲಂತೂ ನಮ್ಮಿಂದ ಸಾಧ್ಯವಿಲ್ಲ. ಆದರೆ ನಾವು ಏನಾದರೂ ಮಾಡಬೇಕು. ಒಂದು ನಾಲ್ಕೈದು ಲಕ್ಷ ಹಣ ಕೊಡೋಣ ಅವರಿಗೆ ಸಹಾಯವಾಗುತ್ತದೆ ಎಂದು ಧ್ರುವ ಸರ್ಜಾ ಹೇಳಿದರು. ಅವರು ಶೂಟಿಂಗ್ನಲ್ಲಿರುವ ಕಾರಣ ನೇರವಾಗಿ ಭೇಟಿಯಾಗಲು ಸಾಧ್ಯವಾಗಲಿಲ್ಲ. ಹೀಗಾಗಿ ನನ್ನ ಕೈಲಿ ಕ್ಯಾಶ್ ಕೊಟ್ಟರು. ಇದರಿಂದ ಹರ್ಷ ಕುಟುಂಬಕ್ಕೆ ಸ್ವಲ್ಪ ಧೈರ್ಯ ಬರಬಹುದು ಎಂಬ ನಂಬಿಕೆ ನಮ್ಮದು ಎಂದು ಪ್ರಥಮ್ ಹೇಳಿಕೊಂಡಿದ್ದಾರೆ.
ಇದ್ರ ಜೊತೆಗೆ 2015ರಲ್ಲಿ ಗಲಭೆಯಲ್ಲಿ ಹತ್ಯೆಗೀಡಾಗಿದ್ದ ವಿಶ್ವನಾಥ್ ಶೆಟ್ಟಿಯವರ ಮನೆಗೂ ಪ್ರಥಮ್ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದ್ದಾರೆ. ಜೊತೆಗೆ 50 ಸಾವಿರ ರೂಪಾಯಿ ದನ ಸಹಾಯ ಮಾಡಿದ್ದಾರೆ.



