ಮುತಾಲಿಕ್, ಕು.ಚೈತ್ರಾ, ಸಿದ್ದಲಿಂಗ ಸ್ವಾಮೀಜಿಗೆ ಕಲಬುರಗಿ ಪ್ರವೇಶ ನಿರ್ಬಂಧ

ಕಲಬುರಗಿ: ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆ.27 ರಿಂದ ಮಾ.3ರ ವರೆಗೆ ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ ಹಾಗೂ ಕುಂದಾಪುರದ ಚೈತ್ರಾ ಕುಂದಾಪುರ ಅವರಿಗೆ ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಸಿ.ಆರ್.ಪಿ.ಸಿ ಕಾಯ್ದೆ-1973ರ ಕಲಂ-132, 143, 144 ಹಾಗೂ 144ಎ ರನ್ವಯ ನಿರ್ಬಂಧ ಹೇರಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ.
ಇದಲ್ಲದೆ ಜೇವರ್ಗಿ ತಾಲೂಕಿನ ಆಂದೋಲದ ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಸಹ ಫೆ. 27 ರಿಂದ ಮಾ.3ರ ವರೆಗೆ ಆಳಂದ ತಾಲೂಕು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಶಿವರಾತ್ರಿ ಅಂಗವಾಗಿ ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ಶುದ್ಧೀಕರಣ ಕಾರ್ಯಕ್ರಮಕ್ಕೆ ಸಿದ್ದಲಿಂಗ ಸ್ವಾಮೀಜಿ ಕರೆ ನೀಡಿದ್ದಾರೆ. ಅಲ್ಲದೆ ಫೆ.27ಕ್ಕೆ ಆಳಂದ ಚಲೋ ಕರೆ ನೀಡಿದ್ದಾರೆ.
ಆದ್ರೆ ಲಾಡ್ಲೆ ಮಶಾಕ್ ದರ್ಗಾದಲ್ಲಿ ಮಾರ್ಚ್ 01 ರಂದು ಸಂದಲ್ ಮತ್ತು ಶಬ್-ಏ-ಬರಾತ್ ಕಾರ್ಯಕ್ರಮ ಕೂಡಾ ಇದೆ. ಹೀಗಾಗಿ ಶಾಂತಿ ಸುವ್ಯವಸ್ಥೆ ಮತ್ತು ಕೋಮು ಸೌಹಾರ್ದತೆ ಧಕ್ಕೆ ಉಂಟಾಗುವ ಸಾಧ್ಯತೆವಿರುವ ಕಾರಣ ಪ್ರಮೋದ ಮುತಾಲಿಕ, ಚೈತ್ರಾ ಕುಂದಾಪುರ ಅವರನ್ನು ಕಲಬುರಗಿ ಜಿಲ್ಲೆ ಪ್ರವೇಶಿಸದಂತೆ ಮತ್ತು ಸಿದ್ದಲಿಂಗ ಸ್ವಾಮೀಜಿ ಅವರನ್ನು ಆಳಂದ ತಾಲೂಕು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.
