ಮತ ಹಾಕಲು ಹೆಲಿಕಾಪ್ಟರ್ ನಲ್ಲಿ ಬಂದ ಬಿಜೆಪಿ ಎಂಎಲ್ ಸಿಗಳು…!

ದಾವಣಗೆರೆ : ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಹೈಟೆಕ್ ತಂತ್ರ ಪ್ರಯೋಗ ಮಾಡಿದ ವಿಶೇಷ ಘಟನೆಗೆ ಸಾಕ್ಷಿಯಾಗಿದೆ.
ಲೋಕಸಭೆ ಹಾಗೂ ವಿಧಾನಸಭೆ ಸೇರಿದಂತೆ ಪ್ರಮುಖ ಚುನಾವಣೆಯಲ್ಲಿ ಹೆಲಿಕಾಪ್ಟರ್ ಬಳಸುವುದು ಸಾಮಾನ್ಯ. ಆದರೆ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತ ಚಲಾಯಿಸಲು ಹೆಲಿಕಾಪ್ಟರ್ ನಲ್ಲಿ ಬರುವ ಮೂಲಕ ಬಿಜೆಪಿ ವಿಧಾನ ಪರಿಷತ್ ಸದಸ್ಯರು ಅಚ್ಚರಿ ಮೂಡಿಸಿದರು.
ತೇಜಸ್ವಿನಿ ರಮೇಶ್, ಎನ್. ರವಿಕುಮಾರ್, ಆರ್. ಶಂಕರ್, ಕೆ.ಪಿ ನಂಜುಂಡಿ ಅವರು ಜಿಎಂಐಟಿ ಹೆಲಿಪ್ಯಾಡ್ ನಲ್ಲಿ ಬಂದಿಳಿದರು. ಈ ವೇಳೆ ನಿಕಟ ಪೂರ್ವ ಮೇಯರ್ ಎಸ್. ಟಿ. ವೀರೇಶ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಂಸದ ಜಿ.ಎಂ. ಸಿದ್ದೇಶ್ವರ್ ಅವರೊಂದಿಗೆ ಸಮಾಲೋಚನೆ ನಡೆಸಿದರು.
ಕಳೆದ ಒಂದು ವಾರದ ಹಿಂದೆ ಚುನಾವಣೆ ಘೊಷಣೆಯಾಗಿದ್ದರೂ ದಾವಣಗೆರೆಗೆ ಒಂದು ದಿನ ಮುಂಚೆ ಬಾರದ ಎಂಎಲ್ಸಿ ಗಳು ಹೆಲಿಕಾಪ್ಟರ್ ನಲ್ಲಿ ಬರುವ ಮೂಲಕ ಹೈಟೆಕ್ ಆಗಿದ್ದು ಈ ಬಾರಿಯ ಚುನಾವಣೆಯ ವಿಶೇಷ.
ಅದಲುಬದಲು ತಂತ್ರ ಬದಲು:
ಈ ಬಾರಿಯ ಮಹಾನಗರ ಪಾಲಿಕೆ ಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್ ಆಯ್ಕೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗಿತ್ತು. ನಿನ್ನೆ ರಾತ್ರಿವರೆಗೂ ಅವರ ಹೆಸರೇ ಮುಂಚೂಣಿಯಲ್ಲಿತ್ತು. ಜಯಮ್ಮ ಗೋಪಿನಾಯ್ಕ್ ಹೆಸರಿದ್ದರೂ ಕೂಡ ಅವರು ಪಕ್ಷೇತರವಾಗಿ ಗೆದ್ದ ಕಾರಣ ಶಿಲ್ಪಾ ಅವರಿಗೆ ಸಿಗುವ ಸಾಧ್ಯತೆ ಕಂಡುಬಂದಿತ್ತು. ಪಕ್ಷ ನಿಷ್ಠರಿಗೆ ಮೇಯರ್ ಪಟ್ಟ ನೀಡದೆ ಪಕ್ಷೇತರ ಅಭ್ಯರ್ಥಿಗೆ ಮೇಯರ್ ಪಟ್ಟ ಲಭಿಸಿರುವುದರ ಹಿಂದೆ ಕೆಲ ಬಿಜೆಪಿಯ ಸದಸ್ಯರು ಜಯಮ್ಮ ಗೋಪಿನಾಥ್ ಪರವಿದ್ದ ಕಾರಣ ಅಂತಿಮವಾಗಿ ಇವರಿಗೆ ಅದೃಷ್ಟ ಒಲಿದು ಬಂದಿದೆ. ಇದು ಜಿಎಂಐಟಿಯಲ್ಲಿ ನಡೆದ ಅದಲುಬದಲು ತಂತ್ರದ ಫಲ ಎಂದು ಹೇಳಲಾಗಿದೆ.
