ಕಾಲುಬಾಯಿ ಜ್ವರದಿಂದ ರಾಸುಗಳ ಸಾವು; ರಾಮನಗರದಲ್ಲಿ ಹೈನುಗಾರಿಕೆಗೆ ಸಂಕಷ್ಟ

ರಾಮನಗರ ಜಿಲ್ಲೆಯಲ್ಲಿ ರಾಸುಗಳಿಗೆ ಕಾಲುಬಾಯಿ ಜ್ವರದ ಬಾಧೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಜಿಲ್ಲೆಯ ರಾಮನಗರ, ಮಾಗಡಿ, ಚನ್ನಪಟ್ಟಣ ಮತ್ತು ಕನಕಪುರ ತಾಲೂಕಿನಲ್ಲಿ ಕಾಲು ಬಾಯಿ ಜ್ವರದಿಂದ ನೂರಾರು ರಾಸುಗಳು ಮಾತ್ರ ಸಾವನಪ್ಪಿವೆ. ಆದ್ರೆ ಪಶುಸಂಗೋಪನೆ ಇಲಾಖೆಯ ಲೆಕ್ಕದಲ್ಲಿ ಸತ್ತ ರಾಸುಗಳ ಸಂಖ್ಯೆ ಇಪ್ಪತ್ತೈದು ಮಾತ್ರ!
ರಾಜೇಶ್ ಕೊಂಡಾಪುರ
ರಾಮಮಗರ: ಆತ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆದುತ್ತಿದ್ದ ರೈತ. ಸುಮಾರು 30 ಹಸುಗಳನ್ನ ಸಾಕಿಕೊಂಡು ಅವುಗಳನ್ನ ಪೋಷಣೆ ಮಾಡುತ್ತಿದ್ದ. ಆದರೆ, ಇತ್ತೇಚೆಗೆ ಕಾಲುಬಾಯಿ ರೋಗ ಕಾಣಿಸಿಕೊಂಡ ಪರಿಣಾಮ ಕಳೆದ ಮೂರು ದಿನಗಳಲ್ಲಿ ಆತ ಸಾಕಲಾಗಿದ್ದ 5 ಹಸುಗಳು ಪ್ರಾಣ ಬಿಟ್ಟಿವೆ. ಅದನ್ನೇ ನಂಬಿಕೊಂಡಿದ್ದ ರೈತರಿಗೆ ಹಸುಗಳ ಸಾವು ಬರಸಿಡಿಲು ಬಡಿದಂತಾಗಿದ್ದು, ಇರುವ ಹಸುಗಳನ್ನು ಉಳಿಸಿಕೊಳ್ಳಲು ಆ ರೈತ ಪರಿತಪಿಸುತ್ತಿದ್ದಾನೆ.
ಹೌದು, ರಾಮನಗರ ತಾಲೂಕಿನ ಬಿಡದಿಯ ಹೋಬಳಿ ಬಾನಂದೂರು ಗ್ರಾಮದಲ್ಲಿ ಬಸವರಾಜ್ ಎಂಬ ರೈತ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಆದ್ರೆ, ಜೆರ್ಸಿ ಮತ್ತು ಎಚ್.ಎಫ್ ತಳಿಯ ೫ ರಾಸುಗಳು ಕಾಲು ಬಾಯಿ ಜ್ವರ ಕಾಣಿಸಿಕೊಂಡ ಪರಿಣಾಮ ಮಗುವಿನಂತೆ ಸಾವನಪ್ಪಿವೆ. ಇದರಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜ್ವರ ಕಾಣಿಸಿಕೊಂಡ ತಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಡಲಾಗಿತ್ತು. ಆದ್ರೆ ಯಾವುದೇ ಪ್ರಯೋಜವಾಗಿಲ್ಲ. ಬುಧವಾರ ಹಿಂದಿಂದೆಯೇ ಸುಮಾರು 4 ಹಸುಗಳು ಸಾವನಪ್ಪಿದ್ದವು. ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದರೂ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಾಗಿಲ್ಲ ಎಂಬ ಆರೋಪವೂ ಇದೆ. ಇನ್ನು ಇಂದು ಮತ್ತೊಂದು ಹಸು ಮೃತಪಟ್ಟಿದೆ. ಇದರಿಂದ ಕಂಗಲಾಗಿರುವ ರೈತರ ಅಧಿಕಾರಿಗಳ ವಿರುದ್ಧ ಅಸಮಾಧಾನ ರಾಸು ಕಳೆದುಕೊಂಡ ರೈತ ಬಸವರಾಜು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರತಿನಿತ್ಯವೂ ಸರಿಸುಮಾರು 90 ಲೀಟರ್ ಹಾಲು ಕರೆದು ಹಾಲಿನ ಕೇಂದ್ರಕ್ಕೆ ರೈತ ಬಸವರಾಜ್ ಕೊಡುತ್ತಿದ್ದಾರೆ. ವರ್ಷಗಳಿಂದ ಸಾಕಿದ್ದ ಹಸು ಇನ್ನೇನು ಕರು ಹಾಕಿ ಹಾಲು ಕೊಡಬೇಕು ಎನ್ನುವ ಸಮಯದಲ್ಲಿ ಒಂದೆರೆಡು ಹಸುಗಳಲ್ಲಿ ರೋಗ ಕಾಣಿಸಿಕೊಂಡು ಸಾವನಪ್ಪಿದೆ. ಸುಮಾರು 5 ಹಸುಗಳು ಸಾವನಪ್ಪಿರುವುದರಿಂದ ಸುಮಾರು 2.5 ಲಕ್ಷ ರೂ. ನಷ್ಟವಾಗಿದೆ.
ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹಸುಗಳು ಸಾವನ್ನಪ್ಪಿವೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ಸಮಯಕ್ಕೆ ತಕ್ಕಂತೆ ಲಸಿಕೆ ಹಾಕಿದ್ದರೆ ಹಸುಗಳು ಬದುಕುಳಿಯುತ್ತಿತ್ತು. ಆದ್ರೆ, ಸಮಯಕ್ಕೆ ಲಸಿಕೆ ಕೊಡದೇ ಇರುವುದೇ ಹಸುಗಳ ಸಾವಿಗೆ ಕಾರಣ ಎನ್ನಲಾಗಿದೆ. ಕೂಡಲೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರೈತನಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು ಗ್ರಾಮದ ಯುವ ಮುಖಂಡ ನಂಜುಂಡಿ ಆಗ್ರಹಿಸಿದ್ದಾರೆ.
ಒಟ್ಟಾರೆ, ರಾಮನಗರ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನೇ ನಂಬಿ ಅದೆಷ್ಟೋ ರೈತರು ಬದುಕು ಸಾಗಿಸುತ್ತಿದ್ದಾರೆ. ಇನ್ನು ಕಾಲುಬಾಯಿ ರೋಗ ಸಹ ಜಿಲ್ಲೆಯಲ್ಲಿ ಉಲ್ಬಣವಾಗುತ್ತಿದೆ. ಈಗಾಗಲೇ ನೂರಾರು ರಾಸುಗಳು ಕಾಲು ಬಾಯಿ ಜ್ವರಕ್ಕೆ ಬಲಿಯಾಗಿದ್ದರೂ ಪಶು ಸಂಗೋಪನಾ ಇಲಾಖೆಯಲ್ಲಿ ಮಾತ್ರ ಸತ್ತ ರಾಸುಗಳ ಸಂಖ್ಯೆ ಎರಡಂಕಿಯಲ್ಲಿಯೇ ಇದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಹೈನುಗಾರಿಕೆ ರೈತರ ಒತ್ತಾಯವಾಗಿದೆ.




