ಹರಿಹರದಲ್ಲಿ ಸಿಎಂಗೆ ಘೆರಾವು ಯತ್ನ: ಮಾತಿನ ಚಕಮಕಿ

ದಾವಣಗೆರೆ: ಹರಿಹರ ನಗರದ ಸಮಗ್ರ ಅಭಿವೃದ್ಧಿಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಘೇರಾವ್ ಹಾಕಲು ಯತ್ನಿಸಿದ ಘಟನೆ ನಡೆದಿದೆ.
ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ರಾಘವೇಂದ್ರ ಸ್ವಾಮಿ ಮಠ ಸಮೀಪದ ತುಂಗಭದ್ರಾ ನದಿತೀರದಲ್ಲಿ ಏರ್ಪಡಿಸಿದ್ದ ತುಂಗಾರತಿ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮುಖ್ಯಮಂತ್ರಿಗಳು ವಾಪಸಾಗುತ್ತಿದ್ದ ವೇಳೆ ಪ್ರತಿಭಟನಾಕಾರರು ರಸ್ತೆ ತಡೆದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಜನರನ್ನು ಚದುರಿಸಿದ ಪೊಲೀಸರು ಸಿಎಂ ಮತ್ತು ಸಚಿವರ ಕಾರುಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹರಿಹರ ನಗರಸಭೆಯ ನೂತನ ಕಟ್ಟಡ, ಸುಸಜ್ಜಿತ ಕನ್ನಡ ಭವನ ಹಾಗೂ ಸೂಪರ್ ಮಾರ್ಕೆಟ್ ನಿರ್ಮಾಣ ಮತ್ತು ಸಾರ್ವಜನಿಕ ಆಸ್ಪತ್ರೆಗೆ ಹೆಚ್ಚುವರಿ ಬೆಡ್ ಮುಂತಾದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸಲಾಯಿತು. ಕಳೆದ ಐದಾರು ವರ್ಷಗಳಿಂದ ಕಳಪೆಯಾಗಿ ಸಂಚಾರಕ್ಕೆ ಯೋಗ್ಯವಾಗಿರದಿದ್ದ ರಸ್ತೆಯನ್ನು ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಮಣ್ಣು ಹಾಕಿ ತರಾತುರಿಯಲ್ಲಿ ದುರಸ್ತಿ ಮಾಡಿದ್ದು ಕೂಡ ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
