ಶಾಲೆಗಳಿಗೆ ರೇಣುಕಾಚಾರ್ಯ ದಿಢೀರ್ ಭೇಟಿ: ಮಕ್ಕಳಿಗೆ ಹೇಳಿದ ಹಿತವಚನವೇನು…?

ದಾವಣಗೆರೆ: ಹೊನ್ನಾಳಿ – ನ್ಯಾಮತಿ ತಾಲೂಕಿನ ಶಾಲೆಗಳಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಸೋಮವಾರ ಭೇಟಿ ನೀಡಿದರು. ಈ ವೇಳೆ ಶಾಲಾ ಆಡಳಿತ ಮಂಡಳಿ ಜೊತೆ ಸಮಾಲೋಚನೆ ನಡೆಸಿದರು. ವಿದ್ಯಾರ್ಥಿಗಳ ಜೊತೆ ಸಮಾಲೋಚನೆ ಮಾಡಿದ ರೇಣುಕಾಚಾರ್ಯ, ಎಲ್ಲರೂ ಭಾರತ ಮಾತೆಯ ಮಕ್ಕಳು. ನಿಮಗೆಲ್ಲರಿಗೂ ಶಿಕ್ಷಣ ಮುಖ್ಯ ಎಂದು ಹೇಳಿದರು.
ಶಾಲೆಗಳಲ್ಲಿ ಈಗಾಗಲೇ ಸಮವಸ್ತ್ರ ಜಾರಿಗೊಳಿಸಲಾಗಿದೆ. ಈಗ ಒಬ್ಬರ ಮುಖ ಮತ್ತೊಬ್ಬರು ನೋಡದ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಘರ್ಷಕ್ಕೆ ಎಡೆ ಮಾಡಿಕೊಡದೇ ಎಲ್ಲರೂ ವರ್ತಿಸಬೇಕು. ಈಶ್ವರ, ಅಲ್ಲಾ, ಏಸು ಎಲ್ಲರಿಗೂ ಆರಾಧ್ಯ ದೇವರು. ಅವರವರ ಧರ್ಮ ಅವರವರ ಮನೆಯಲ್ಲಿ ಪಾಲಿಸಲಿ. ಶಾಲಾ ಕಾಲೇಜುಗಳಲ್ಲಿ ಸಮಾನತೆ ಇರಬೇಕು. ಹಿಜಾಬ್ ಹಾಗೂ ಕೇಸರಿ ಶಾಲು ವಿವಾದ ತಾರಕಕ್ಕೇರಿ ಕೆಲವೆಡೆ ಕೋಮುಗಲಭೆಗೆ ಕಾರಣವಾಗಿದೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸೋಣ ಎಂದು ಕರೆ ನೀಡಿದರು.
ವಿದ್ಯಾರ್ಥಿಗಳು ಯಾವುದಕ್ಕೂ ತಲೆಕೆಡಿಸಿಕೊಳ್ಳಬೇಡಿ. ಓದಿನತ್ತ ಗಮನ ಹರಿಸಿ. ಸಂಘರ್ಷಕ್ಕೆ ಎಡೆಮಾಡಿಕೊಡಬೇಡಿ. ಪ್ರಚೋದನೆಗೆ ಒಳಗಾಗಬೇಡಿ. ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಸಲಹೆ ನೀಡಿದರಲ್ಲದೇ, ನಾಳೆಯಿಂದ ಶಾಲೆಗಳು ಪ್ರಾರಂಭವಾಗಲಿವೆ. ಎಲ್ಲರೂ ಸಮವಸ್ತ್ರ ಧರಿಸಿ ಶಾಲೆಗೆ ಬನ್ನಿ ಎಂದು ಹೇಳಿದರು.



