ಬಿಗ್ ಬಾಸ್ : ಹೆಚ್ಚಿನವರು ಪ್ರಶಾಂತ್ ಸಂಬರಗಿ ಫೋಟೋ ಸುಟ್ಟರು!
23/06/2021
0 84 1 minute read
– ಪೂರ್ಣ ವಿ-ರಾಮ
ಹೌದು ಸ್ವಾಮಿ, ಬಿಗ್ ಬಾಸ್ ಕಾರ್ಯಕ್ರಮ ಇದೀಗ ಮತ್ತೆ ಶುದ್ಧ ಸುದ್ದಿಯಾಗಿದೆ. ಇದೇ ಮೊದಲ ಬಾರಿಗೆ ಅರ್ಧಕ್ಕೆ ನಿಂತು ಅದು ರೀ ಸ್ಟಾರ್ಟ್ ಆದ ಕಾರಣ ಈ ತಿಂಗಳ ಗ್ಯಾಪ್ ನಲ್ಲಿ ಎಲ್ಲರೂ ತಮ್ಮ ಬಗ್ಗೆ ಯಾರ್ಯಾರು ಹೇಗೇಗೆಲ್ಲಾ ಆಟ ಆಡಿದ್ದಾರೆ? ಯಾರ್ಯಾರು ಹೇಗೇಗೆ ಎನ್ನುವುದನ್ನ ನೋಡಿಕೊಂಡು ಆಟ ರೀ ಮತ್ತೆ ಶುರು ಮಾಡಲು ಮುಂದಾಗಿದ್ದಾರೆ.
ಮೊದಲು ಹೀಗೆ ಇರುತ್ತಿರಲಿಲ್ಲ!
ಕನ್ ಫೆಷನ್ ರೂಮ್ ನಲ್ಲಿ ಒಬ್ಬರನ್ನೊಬ್ಬರು ಬೈಯ್ಯುವುದು, ಹೊಗಳುವುದು / ಸಿಂಗಲ್ ಕ್ಯಾಮೆರಾಗೆ ಮಾತನಾಡುವುದು, ಸೀಕ್ರೆಟ್ ನಾಮಿನೇಟ್ ಮತ್ತು ಎಲಿಮಿನೇಟ್ ಪ್ರಕ್ರಿಯೆ ಇರುತ್ತಿದ್ದ ಬಿಗ್ ಬಾಸ್ ನಲ್ಲಿ ನಮ್ಮ ಬೆನ್ನಿಗೆ ಯಾರು ಚೂರಿ ಇರಿಯುತ್ತಿದ್ದಾರೆ ಎಂದು ಯಾರೊಬ್ಬರಿಗೂ ಸುಳಿವು ಸಿಗುತ್ತಿರಲಿಲ್ಲ. ಜೊತೆ ಜೊತೆಗೇ ಇದ್ದು ಜೊತೆ ಜೊತೆಗೇ ನಕ್ಕು ಜೊತೆ ಜೊತೆಗೇ ಕೊಳ್ಳಿ ಇಡುವ ಕಾರ್ಯಕ್ರಮ ಮೊದಲು ನಡೆಯುತ್ತಿತ್ತು. ಈಗಲೂ ನಡೆಯುತ್ತಿದೆ. ಆದರೆ ಅದ್ಯಾವುದೂ ಪರಸ್ಪರ ಸ್ಪರ್ಧಿಗಳಿಗೆ ಗೊತ್ತಾಗುತ್ತಲೇ ಇರಲಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದ ನಂತರ ಒಬ್ಬರಿಗೊಬ್ಬರು ತಂಡ ಕಟ್ಟಿಕೊಂಡು ಕಿತ್ತಾಟ ಕೂಗಾಟ ಮಾಡಿ ನ್ಯೂಸ್ ಚಾನೆಲ್ ಗಳಿಗೆ ಆಹಾರ ಆಗುತ್ತಿದ್ದರು.
ಈ ಸೀಜನ್ ಈ ಕಾರಣಕ್ಕೆ ಮಜಾ ಎನಿಸಬಹುದು!
ಆದರೆ ಈ ಸಲ ಕೊರೋನಾ ಎಫೆಕ್ಟ್ ಕಾರಣಕ್ಕೆ ಅದು ಹಾಗೆ ಆಗುತ್ತಿಲ್ಲ. ಎಲ್ಲರೂ ಅರ್ಧಕ್ಕೇ ಆ ಮನೆಯಿಂದ ಹೊರಬಂದುಬಿಟ್ಟರು. ಬಂದವರೇ ಹಿಂದೆ ನಡೆದ ಅಷ್ಟೂ ಸಂಚಿಕೆಯನ್ನ ಪರಸ್ಪರ ಹಂಚಿಕೆ ಮಾಡಿಕೊಂಡು ನೋಡಿಬಿಟ್ಟರು. ಯಾರ್ಯಾರು ಹೇಗೇಗೆ? ಯಾರ್ಯಾರು ಯಾರ್ಯಾರ ಪಾರ್ಟಿ ಎನ್ನುವುದನ್ನ ಗೊತ್ತುಮಾಡಿಕೊಂಡು, ಒಳಗೊಳಗೇ ಅವರ ಬಗ್ಗೆ ಹಲ್ಲುಕಡಿದುಕೊಂಡು ಇದೀಗ ಮತ್ತೆ ಎಲ್ಲರೂ ಒಂದೇ ವೇದಿಕೆ ಏರುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ, ಪ್ರಶಾಂತ್ ಸಂಬರಗಿಯಂಥ ಮಾತುಗಾರರು, ಚಂದ್ರಚೂಡ್ ಜಗದಲ್ಲಿ ಚಕ್ರವರ್ತಿಯಂಥ ಚತುರ ಚಾಣಾಕ್ಷರು ಮನೆ ಒಳಗೆ ಇರುವುದರಿಂದ ಅಲ್ಲಿ ಏನೋ ಒಂದಷ್ಟು ಅನಾಹುತಕಾರೀ ಸ್ವಾರಸ್ಯಕರ ಘಟನೆಗಳು ಘಟಿಸುವುದಂತೂ ಶತಃಸಿದ್ಧ. ದಿವ್ಯಾ ಉರುಡುಗ, ಮಂಜು ಪಾವಗಡ, ಶುಭಾ ಪೂಂಜಾ, ನಿಧಿ ಸುಬ್ಬಯ್ಯ, ವೈನ್ ಸ್ಟೋರ್ ರಘು ಸೇರಿದಂತೇ ಒಂದಷ್ಟು ಡಿಫರೆಂಟ್ ಡಿಫರೆಂಟ್ ಕ್ಯಾರೆಕ್ಟರ್ ಗಳು ಇರುವುದರಿಂದ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟುತ್ತದೆ ಕಾದುನೋಡಬೇಕು!
ಸಂಬರಗಿ & ಚಂದ್ರಚೂಡ್ ಹೈಲೈಟ್!
ಇಡೀ ಬಿಗ್ ಬಾಸ್ ನಲ್ಲಿ ಅಥೆಂಟಿಕ್ ಆಗಿ ಮಾತನಾಡುವವರು ಅಂದರೆ ಅದು ಒಂದು ಚಂದ್ರಚೂಡ್ ಚಕ್ರವರ್ತಿ. ಮಾತಿಗೆ ನಿಂತರೆ ಆತನನ್ನು ಮೀರಿಸುವವರು ಇನ್ನೊಬ್ಬರಿಲ್ಲ ಎನ್ನುವಂತೇ ಮುನ್ನುಗ್ಗೋ ಚಂದ್ರಚೂಡ್, ಮೂಲತಃ ಬರಹಗಾರ, ಪತ್ರಕರ್ತ ಆಗಿರುವುದರಿಂದ ಅಲ್ಲಿ ಹೈಲೈಟ್ ಆಗೋದ್ರಲ್ಲಿ ಡೌಟ್ ಇಲ್ಲ. ಪ್ರಶಾಂತ್ ಸಂಬರಗಿ ಅಂತೂ ಡ್ರಗ್ಸ್ ಕೇಸ್ ಸಮಯದಿಂದ ಹಿಡಿದು ಇವತ್ತಿನ ವರೆಗೂ ಸೌಂಡ್ ಮಾಡುತ್ತಲೇ ಇದ್ದಾರೆ. ಜೊತೆಗೆ ಸಿಸಿಬಿ ಕಚೇರಿ ಅವರಿಗೆ ಅಕ್ಕ ಪಕ್ಕದ ಮನೆಯಂತೇ ಆಗಿಬಿಟ್ಟಿತ್ತು. ಈ ಎಲ್ಲಾ ಕಾರಣದಿಂದ ಪ್ರಶಾಂತ್ ಮತ್ತು ಚಂದ್ರಚೂಡ್ ಕಾಂಟ್ರಾವರ್ಸಿಯ ಕೇಂದ್ರ ಬಿಂದುಗಳಾಗುತ್ತಾರೆ. ಇನ್ನುಳಿದಂತೇ ಕುಚ್ಚು ಕುಚ್ಚು ಹೋಗಯಾ, ಲಲ್ಲಲಲ್ಲಾ ಪ್ಯಾರ್ ಕಿಯಾ ಎನ್ನೋ ದಿವ್ಯಾಂಶ ಸಂಭೂತರು ಮನೆಯಲ್ಲಿ ಇರುವುದರಿಂದ ಒಂದೋ ಬೆಂಕಿ ಬೀಳುತ್ತದೆ. ಇಲ್ಲಾ ಜಗಳ ಹೊಡೆಡಾಟಗಳೇ ಆಗುತ್ತವೆ. ಈಗಾಗಲೇ ಒಬ್ಬರಿಗೊಬ್ಬರು ಇನ್ನೊಬ್ಬರ ಫೋಟೋವನ್ನ ಬೆಂಕಿಗೆ ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿಂದ ದಿ ಗೇಮ್ ಬಿಗಿನ್ಸ್ ನೌ…