ರಾಜ್ಯದೆಲ್ಲೆಡೆ ಹಬ್ಬಿದ ಹಿಜಾಬ್-ಕೇಸರಿ ಕಿಚ್ಚು, ಪರಿಸ್ಥಿತಿ ನೋಡಿ ರಜೆ ಘೋಷಿಸಲು ಡಿಡಿಪಿಐಗಳಿಗೆ ಸೂಚನೆ

ಬೆಂಗಳೂರು: ಹಿಜಾಬ್ ಮತ್ತು ಕೇಸರಿ ಕಿಚ್ಚು ರಾಜ್ಯಾದ್ಯಂತ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ವಿದ್ಯಾರ್ಥಿಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿರುವ ಈ ವಿಚಾರದಲ್ಲಿ ಇತರೆ ಸ್ಥಾಪಿತ ರಾಜಕೀಯ ಹಿತಾಸಕ್ತಿ ಮತ್ತು ಸಂಘಟನೆಗಳ ನೆರಳು ನಿಚ್ಚಳವಾಗಿ ಗೋಚರವಾಗತೊಡಗಿದೆ. ಕುಂದಾಪುರ ಸರ್ಕಾರಿ ಕಾಲೇಜಿನಿಂದ ಆರಂಭವಾದ ಈ ವಿಷಯ ಈಗ ಕೇವಲ ಒಂದು ಕಾಲೇಜು, ಒಂದು ಸಂಸ್ಥೆಗೆ ಸೀಮಿತವಾಗುಳಿದಿಲ್ಲ. ಸೈದ್ಧಾಂತಿಕ ನೆಲೆಯಲ್ಲಿ ಆರೋಪ-ಪ್ರತ್ಯಾಪ, ಪರ-ವಿರೋಧದ ವಾದಗಳ ನಡುವೆ ಇತರೆಡೆಗೂ ವ್ಯಾಪಿಸಿ ಆಂದೋಲನದ ರೂಪ ಪಡೆಯತೊಡಗಿದೆ. ಪರಿಸ್ಥಿತಿ ನೋಡಿಕೊಂಡು ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗುವುದು. ಈ ಅಧಿಕಾರವನ್ನು ಆಯಾ ಜಿಲ್ಲೆಯ ಡಿಡಿಪಿಐಗಳಿಗೆ ನೀಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ.
ರಾಜಕೀಯ ಸ್ವರೂಪ ಪಡೆದ ವಿವಾದ
ರಾಜ್ಯದ ಸೂಕ್ಷ್ಮ ಜಿಲ್ಲೆಗಳಲ್ಲೊಂದಾದ ಶಿವಮೊಗ್ಗದಲ್ಲಿ ವಿವಾದ ತೀವ್ರ ಸ್ವರೂಪ ಪಡೆದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಎರಡು ದಿನ ನಿಷೆಧಾಜ್ಞೆ ಘೋಷಿಸಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಎರಡು ಗುಂಪುಗಳು ನಡುವೆ ಸಂಘರ್ಷ ಏರ್ಪಟ್ಟ ಹಿನ್ನೆಲೆಯಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.
ಹಲವೆಡೆ ಪ್ರತಿಭಟನೆ
ರಾಯಚೂರು, ಉತ್ತರ ಕನ್ನಡ, ರಾಮನಗರ, ತುಮಕೂರು, ಚಿತ್ರದುರ್ಗ,ಗದಗ ಮತ್ತಿತರ ಜಿಲ್ಲೆಗಳಿಗೂ ಚಳವಳಿ ಹಬ್ಬಿದ್ದು ವಿದ್ಯಾರ್ಥಿಗಳು ಪ್ರತಿಭಟನೆ ದಾರಿ ತುಳಿದಿದ್ದಾರೆ. ಚಳವಳಿ ನಿರತ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದೆ. ಕಾನೂನು ಸುವ್ಯವಸ್ಥೆ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.
