ಸಕ್ಕರೆ ಕಾರ್ಖಾನೆ ಚೆಲ್ಲಾಟಕ್ಕೆ ಅನ್ನದಾತ ಹೈರಾಣ : ಬೆಳೆ ಕಳೆದುಕೊಳ್ಳುವ ಆತಂಕದಲ್ಲಿ ರೈತರು

ಕಲಬುರಗಿ: ಕಬ್ಬು ಬೆಳೆಯಿರಿ ನಾವು ಕಬ್ಬು ಖರೀದಿ ಮಾಡುತ್ತೇವೆ ಅಂತ ರೈತರಿಗೆ ಉತ್ತೇಜನ ನೀಡಿದ್ದ ಸಕ್ಕರೆ ಕಾರ್ಖಾನೆ ಈಗ ಕಬ್ಬು ತೆಗೆದುಕೊಂಡು ಹೋಗದೆ ರೈತರೊಂದಿಗೆ ಚೆಲ್ಲಾಟವಾಡುತ್ತಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಕಬ್ಬು ಬೆಳೆದ್ರೆ ಕಬ್ಬು ಜಮೀನಿನಲ್ಲಿಯೇ ಒಣಗುತ್ತಿದೆ. ಕಬ್ಬು ಮಾರಾಟ ಮಾಡಿ ನಾಲ್ಕುದುಡ್ಡು ಮಾಡಬಹುದು ಅನ್ನೋ ರೈತರ ಕನಸ್ಸಿಗೆ ಸಕ್ಕರೆ ಕಾರ್ಖಾನೆ ಕೊಳ್ಳಿ ಇಟ್ಟಿದೆ.
ಹಗಲು ರಾತ್ರಿ ಎನ್ನದೆ ತಾವೇ ನೀರುಣಿಸಿ ಚೆನ್ನಾಗಿ ಬೆಳಸಿದ್ದ ಕಬ್ಬು ತಮ್ಮ ಕಣ್ಣ ಮುಂದೆಯೇ ಒಣಗಿ ಹೋಗುತ್ತಿರುವದನ್ನು ನೋಡಿ ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಯಡ್ರಾಮಿ ತಾಲೂಕಿನ ಕಡಕೋಳ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಯಲ್ಲಿ ಇಂತಹದೊಂದು ಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಕ್ಕರೆ ಕಾರ್ಖಾನೆ. ಯಡ್ರಾಮಿ ತಾಲೂಕಿನ ಮಳ್ಳಿಯಲ್ಲಿ ಉಗಾರ್ ಶುಗರ್ ಅನ್ನೋ ಸಕ್ಕರೆ ಕಾರ್ಖಾನೆಯಿದೆ. ಕಾರ್ಖಾನೆಯವರು ನಿಮ್ಮ ಕಬ್ಬನ್ನು ಖರೀದಿಸುತ್ತೇವೆ. ಕಬ್ಬು ಖರೀದಿ ಜವಾಬ್ದಾರಿ ನಮ್ಮದು ನೀವು ಕಬ್ಬು ಬೆಳೆಯಿರಿ ಅಂತ ಹೇಳಿದ್ದರಿಂದ ಕಡಕೋಳ ಸೇರಿದಂತೆ ಅನೇಕ ಗ್ರಾಮಗಳ ಸಾವಿರಾರು ರೈತರು ತಮ್ಮ ಜಮೀನಿನಲ್ಲಿ ಕಬ್ಬು ಬೆಳದಿದ್ದಾರೆ. ಕಬ್ಬು ಬೆಳೆಯಲು ರೈತರು ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಈ ಬಾರಿ ಉತ್ತಮ ಇಳುವರಿ ಕೂಡಾ ಬಂದಿದೆ. ಹೀಗಾಗಿ ಉತ್ತಮ ಆಧಾಯದ ನಿರೀಕ್ಷೆಯಲ್ಲಿದ್ದರು. ಆದ್ರೆ ರೈತರ ನಿರೀಕ್ಷೆಯನ್ನು ಸಕ್ಕರೆ ಕಾರ್ಖಾನೆಗಳು ತಲೆ ಕೆಳಗೆ ಮಾಡಿವೆ.
ಕಳೆದ ಡಿಸೆಂಬರ್ ತಿಂಗಳಲ್ಲಿಯೇ ಕಬ್ಬು ಕಟಾವು ಆಗಬೇಕಿತ್ತು. ಆದ್ರೆ ಜನವರಿ ತಿಂಗಳು ಮುಗಿಯಲಿಕ್ಕೆ ಬಂದರು ಕೂಡಾ ಕಬ್ಬು ಕಟಾವಾಗಿಲ್ಲಾ. ಹೀಗಾಗಿ ಜಮೀನಿನಲ್ಲಿಯೇ ಲಕ್ಷಾಂತರ ಮೌಲ್ಯದ ಕಬ್ಬು ಒಣಗಿ ಹೋಗುತ್ತಿದೆ. ಡಿಸೆಂಬರ್ ತಿಂಗಳಲ್ಲಿಯೇ ಕಬ್ಬು ಕಟಾವು ಆಗಿದ್ದರೆ ಪ್ರತಿ ಎಕ್ಕರೆಗೆ ನಲವತ್ತರಿಂದ ಐವತ್ತು ಟನ್ ಆಗುತ್ತಿತ್ತು. ಆದ್ರೆ ಈಹ ಕಬ್ಬಿನೊಳಗಿನ ಹಾಲು ಬತ್ತುತ್ತಿದೆ. ಪ್ರತಿ ಎಕ್ಕರೆಗೆ ಇಪ್ಪತ್ತರಿಂದ ಇಪ್ಪತ್ತೈದು ಟನ್ ಮಾತ್ರ ಇಳುವರಿ ಬರಲಿದೆ. ಬಂದಷ್ಟು ಬರಲಿ ಮೊದಲು ತಮ್ಮ ಜಮೀನಿನಲ್ಲಿನ ಕಬ್ಬು ಕಟಾವು ಮಾಡಿಕೊಂಡು ಹೋಗಿ ಅಂತ ಸಕ್ಕರೆ ಕಾರ್ಖಾನೆಯವರಿಗೆ ಮನವಿ ಮಾಡಿದ್ರು ಕೂಡಾ ಕಬ್ಬು ಕಟಾವು ಆಗುತ್ತಿಲ್ಲಾ. ಹೀಗಾಗಿ ಲಕ್ಷಾಂತರ ಮೌಲ್ಯದ ಕಬ್ಬು ಕಟಾವಾಗದೇ ತಾವು ಬೀದಿಗೆ ಬೀಳುವ ಆತಂಕದಲ್ಲಿದ್ದಾರೆ. ಇದಕ್ಕೆಲ್ಲ ಸಕ್ಕರೆ ಕಾರ್ಖಾನೆಯೇ ಕಾರಣ ಅಂತ ರೈತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಫೇಬ್ರವರಿ ತಿಂಗಳಿನಲ್ಲಿ ಕಬ್ಬು ನುರಿಯುವದನ್ನು ನಿಲ್ಲಿಸುವದಾಗಿ ಕಾರ್ಖಾನೆ ಹೇಳುತ್ತಿದೆ. ಈಗಾಗಲೇ ಒಣಗುತ್ತಿರುವ ಕಬ್ಬು, ಇನ್ನೊಂದು ವಾರ ಕಳೆದ್ರೆ ಸಂಪೂರ್ಣವಾಗಿ ಹಾಳಾಗಲಿದೆ. ಹೀಗಾಗಿ ಕಬ್ಬು ಕಟಾವು ಮಾಡಬೇಕು ಅಂತ ರೈತರು ಆಗ್ರಹಿಸಿದ್ದಾರೆ.
ರೈತರ ಕಬ್ಬು ಕಟಾವು ಮಾಡುವಂತೆ ಕೇಳಿದ್ರೆ ಕಾರ್ಖಾನೆಯವರು ಕಾರ್ಮಿಕರ ಕೊರತೆ ನೇಪ ಹೇಳುತ್ತಿದ್ದಾರೆ. ಹೀಗಾದ್ರೆ ನಮ್ಮ ಗತಿ ಏನು ಎನ್ನುವ ಆತಂಕದಲ್ಲಿ ರೈತರಿದ್ದಾರೆ. ಇನ್ನಾದರೂ ಕುಂಟುನೇಪ ಹೇಳುವದು ಬಿಟ್ಟು ಒಣಗುತ್ತಿರುವ ಕಬ್ಬನ್ನು ತಕ್ಷಣ ಕಟಾವು ಮಾಡಬೇಕಿದೆ.



