ಸಂಜಯ ನಗರ ಪೊಲೀಸರ ಕಾರ್ಯಾಚರಣೆ : ಐವರು ನಕಲಿ ಐಟಿ ಅಧಿಕಾರಿಗಳ ಬಂಧನ

ಬೆಂಗಳೂರು: ಐಟಿ ಅಧಿಕಾರಿಗಳ ಸೋಗಿನಲ್ಲಿ ದರೋಡೆ ಮಾಡಿದ್ದ ಐವರು ಆರೋಪಿಗಳನ್ನು ಸಂಜಯ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 1.7 ಲಕ್ಷ ನಗದು ಹಣ, 1 ಪಿಸ್ತೂಲ್, 1 ಕಾರ ಜಪ್ತಿ ಮಾಡಿದ್ದಾರೆ.
ಮಂಜುನಾಥ್, ಶೋಯೆಬ್, ದುರ್ಗೇಶ್, ಕುಮಾರ್, ಪ್ರಶಾಂತ್ ಬಂಧಿತ ಆರೋಪಿಗಳಾಗಿದ್ದು, ಇದರಲ್ಲಿ ಆರೋಪಿ ಮಂಜುನಾತ್ ಪತ್ರಿಕೆಯೊಂದರ ಉಪ ಸಂಪಾದಕ ಎಂದು ತಿಳಿದು ಬಂದಿದೆ.
ಜನವರಿ 23ರಂದು ಸಂಜಯ ನಗರದ ಮನೆಯೊಂದಕ್ಕೆ ನುಗ್ಗಿದ್ದ ಆರೋಪಿಗಳು 3.5 ಲಕ್ಷ ನಗದು ಮತ್ತು ಪಿಸ್ತೂಲ್ ದರೋಡೆ ಮಾಡಿದ್ದರು. ಮನೆಗೆ ಬಂದಿದ್ದ ಆರೋಪಿಗಳು ಏರ್ ಪಿಸ್ತೂಲ್ ಜೊತೆ ನಕಲಿ ಐಡಿ ತಂದಿದ್ದರು. ಬಳಿಕ ಮನೆಯಲ್ಲಿ 45 ನಿಮಿಷ ಪರಿಶೀಲನೆ ನಡೆಸಿದ್ದರು. ದಾಳಿ ವೇಳೆ ಉದ್ಯಮಿ ಮನೆಯಲ್ಲಿ ಇನ್ನೊಂದು ಏರ್ ಪಿಸ್ತೂಲ್ ಪತ್ತೆಯಾಗಿತ್ತು. ಏರ್ ಪಿಸ್ತೂಲ್ ತೆಗೆದುಕೊಂಡು ಜೊತೆಗೆ 3.5 ಲಕ್ಷ ಹಣದ ಜೊತೆಗೆ ವಾಪಾಸ್ ಆಗಿದ್ದರು.
ಬಳಿಕ ಅನುಮಾನಗೊಂಡ ಮನೆ ಮಾಲೀಕ ನೀಡಿದ ದೂರು ಮೇರೆಗೆ ತನಿಖೆ ಆರಂಭಿಸಿದಾಗ ಆರೋಪಿಗಳು ಬಲೆಗೆ ಬಿದ್ದಿದ್ದಾರೆ. ಬಂಧಿತ ಆರೋಪಿಗಳು ಸ್ಥಳೀಯವಾಗಿ ರಿಯಲ್ ಎಸ್ಟೇಟ್ ಬ್ರೋಕರ್ ಕೆಲಸ ಮಾಡುತ್ತಿದ್ದರು. ಈ ವೇಳೆ ರಿಯಲ್ ಎಸ್ಟೇಟ್ ಉದ್ಯಮಿ ವ್ಯವಹಾರ ತಿಳಿದಿದ್ದ ಆರೋಪಿಗಳು, ಹೆಚ್ಚಿನ ಆದಾಯ ಇದೆ ಎಂದು ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ನಡೆಸಿದ್ದರು.
