
ನವದೆಹಲಿ: ಇದೇ ಜ.26 ರಂದು ನಡೆಯುವ ಗಣರಾಜ್ಯೋತ್ಸವ ಪರೇಡ್ ಸಂದರ್ಭದಲ್ಲಿ ಪ್ರತೀ ರಾಜ್ಯಗಳ ಸ್ಥಬ್ದಚಿತ್ರ ಪ್ರದರ್ಶನ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಮಹಾನ್ ಧಾರ್ಮಿಕ ಸುಧಾರಕರಾದ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಪ್ರದರ್ಶನಕ್ಕೆಂದು ಕಳುಹಿಸಿದ್ದ ಪ್ರಸ್ತಾವವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ.
ಕೇರಳ ಸರ್ಕಾರ ಜಟಾಯುಪ್ಪಾರದ ಹಿನ್ನೆಲೆಯ ಮಹಿಳಾ ಸಬಲೀಕರಣ ಮತ್ತು ಪ್ರವಾಸೋದ್ಯಮವನ್ನು ಬಿಂಬಿಸುವ ಸ್ತಬ್ಧಚಿತ್ರಗಳನ್ನು ಗಣರಾಜ್ಯೋತ್ಸವ ಪರೇಡ್ನಲ್ಲಿ ಪ್ರದರ್ಶಿಸಲು ಉದ್ದೇಶಿಸಿತ್ತು. ಇದರೊಂದಿಗೆ ಅದರ ಮುಂಭಾಗದಲ್ಲಿ ಮಹಾನ್ ಧಾರ್ಮಿಕ ಸುಧಾರಕರಾದ ಶ್ರೀ ನಾರಾಯಣ ಗುರುಗಳ ಪ್ರತಿಮೆಯನ್ನು ಇರಿಸುವುದಾಗಿ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿತ್ತು. ಆದರೆ ಇದನ್ನು ತಿರಸ್ಕರಿಸಿದ ಕೇಂದ್ರ ಸರ್ಕಾರ ಆದಿ ಶಂಕರಾಚಾರ್ಯರ ಪ್ರತಿಮೆ ಇಡಬೇಕೆಂದು ಸೂಚಿಸಿದೆ
ಇದು ಈಗ ಭಾರೀ ಚರ್ಚೆಗೆ ಕಾರಣವಾಗಿದ್ದು, ವ್ಯಾಪಕ ಖಂಡನೆ ವ್ಯಕ್ತವಾಗತೊಡಗಿದೆ. ಈ ಬಗ್ಗೆ ಕಾರವನ್ ನಿಯತಕಾಲಿಕ ಸಂಪಾದಕ ವಿನೋದ್ ಜೋಸ್ ಟ್ವೀಟ್ ಮಾಡಿ, “ದಿಲ್ಲಿಯವರಿಗೆ ಬ್ರಾಹ್ಮಣ ಮಹಾತ್ಮ ಬೇಕಿತ್ತು, ಕೇರಳದವರು ಒಬಿಸಿಯ ಮಹಾತ್ಮರನ್ನು ಕಳುಹಿಸಿದರು. ಆದರೆ ಅದನ್ನು ದಿಲ್ಲಿಯವರು ತಿರಸ್ಕರಿಸಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ನಡೆಯುತ್ತಿದ್ದರೂ ನಾವು ಇಲ್ಲಿ ಜಾತಿ ಸಮಸ್ಯೆ ಇಲ್ಲ ಎನ್ನುತ್ತೇವೆ ಎಂದು ಟೀಕಿಸಿದ್ದಾರೆ.



