ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಖಾಸುಮ್ಮನೆ ಕೇಸ್: ಗೃಹ ಸಚಿವರ ಮೇಲೆ ಡಿ ಕೆ ಶಿವಕುಮಾರ್ ಕಿಡಿ
ರಾಮನಗರ: ಎಲ್ಲಿದೆ ಕೊರೊನಾ ಕೇಸ್ ಬಿಜಿಪಿಯವ್ರು ಸುಖಾಸುಮ್ಮನೆ ಕರ್ಫ್ಯೂ ಹೇರಿ ನಮ್ಮ ಪಕ್ಷದ ಕಾರ್ಯಕರ್ತರ ಮೇಲೆ ಕೇಸ್ ದಾಖಲಿಸುತ್ತಿದ್ದಾರೆಂದು ಗೃಹ ಸಚಿವರ ವಿರುದ್ಧ ಕಿಡಿಕಾರಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮೇಕೆದಾಟು ಪಾದಯಾತ್ರೆ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದಾರೆ.
ನಮ್ಮ ನೀರು ನಮ್ಮ ಹಕ್ಕು ಎಂದು ಕೊರೊನಾ ನಿಷೇಧಾಜ್ಞೆ ನಡುವೆಯೂ ಮೇಕೆದಾಟು ಪಾದಯಾತ್ರೆ ನಡೆಸಲು ಅಣಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಕುಟುಂಬ ಸಮೇತರಾಗಿ ಸ್ವಕ್ಷೇತ್ರ ಕನಕಪುರದಲ್ಲಿರುವ ಮನೆ ದೇವರು ಕೆಂಕೇರಮ್ಮ, ಕಬ್ಬಾಳಮ್ಮ ದೇಗುಲ ಸೇರಿದಂತೆ ಪ್ರಮುಖ ದೇವಾಲಯ ಹಾಗೂ ಜಾಮಿಯಾ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.
ಇನ್ನು ಮನೆ ದೇವರು ಕೆಂಕೇರಮ್ಮ ಹಾಗೂ ಸಾತನೂರು ಬಳಿ ಇರುವ ಕಬ್ಬಾಳಮ್ಮ ದೇವಸ್ಥಾನಕ್ಕೆ ಪತ್ನಿ ಸಮೇತರಾಗಿ ಬಂದು ವಿಶೇಷ ಪೂಜೆ ನೆರವೇರಿಸಿದರು. ಹಾಗೆಯೇ ಕಬ್ಬಾಳಮ್ಮ ದೇವರಿಗೆ ಪತ್ನಿ ಉಷಾ ಶಿವಕುಮಾರ್ ಜೊತೆಗೆ ಈಡುಗಾಯಿ ಹೊಡೆದು ಪಾದಯಾತ್ರೆ ಯಶಸ್ವಿಯಾಗಲೆಂದು ಕೋರಿಕೊಂಡ್ರು. ಅಲ್ಲದೇ ಕಬ್ಬಾಳಮ್ಮ ದೇವಸ್ಥಾನದಲ್ಲಿ ನಗಾರಿ ಹೊಡೆಯುವ ಮೂಲಕ ದೇವರಿಗೆ ವಿಶೇಷ ಪೂಜೆ ಕೂಡ ನೆರವೇರಿಸಿದ್ರು.

ಇನ್ನು ಪಾದಯಾತ್ರೆ ಹತ್ತಿಕ್ಕಲು ಬಿಜೆಪಿ ಸರ್ಕಾರ ಎಲ್ಲೂ ಇಲ್ಲದ ರೂಲ್ಸ್ ರಾಮನಗರದಲ್ಲಿ ಜಾರಿಗೆ ತಂದಿದ್ದು, ನಾವು ಪಾದಯಾತ್ರೆ ನಡೆಸಿಯೇ ಸಿದ್ದ ಎಂದು ಘೋಷಿಸಿದ್ರು. ಇನ್ನು ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಡಿಕೆಶಿ ಗೃಹ ಮಂತ್ರಿಗಳ ಬಗ್ಗೆ ಗೌರವ ಕೊಡ್ತೇವೆ. ಆದರೆ ಅವರು ಸರಿಯಾಗಿ ನಡೆದುಕೊಳ್ಳಬೇಕು. ನಮಗೆ ವೈಯಕ್ತಿಕವಾಗಿ ಅವರ ಬಗ್ಗೆ ಬೇಸರವಿಲ್ಲ. ಈಗ ನಮ್ಮ ಹುಡುಗರು ಬಿಜಾಪುರ ಹಾಗೂ ಇತರೆ ಕಡೆಯಿಂದ ವಿಡಿಯೋ ಕಳುಹಿಸುತ್ತಿದ್ದಾರೆ. ಅಲ್ಲಿಯೂ ಕೂಡ ನಮ್ಮ ಕಾರ್ಯಕರ್ತರ ವಿರುದ್ದ ಕೇಸ್ ಹಾಕ್ತಾ ಇರೋದು ಸಮಂಜಸವಲ್ಲ ಎಂದು ಟಫ್ ರೂಲ್ಸ್ ವಿರುದ್ಧ ಕಿಡಿಕಾರಿದ್ರು.
ಅಂದಹಾಗೆ ರಾಮನಗರದಲ್ಲಿ ಯಾವ ಕೊರೊನಾ ಕೇಸ್ ಇಲ್ಲ. ಇಲ್ಲಿ ಯಾಕೆ ನಿರ್ಬಂಧ ಹಾಕ್ತಾರೆ ಗೊತ್ತಿಲ್ಲ. ಒಬ್ಬ ಗೃಹ ಸಚಿವರಾಗಿ ಗಂಭೀರ ಸ್ವರೂಪದ ಪ್ರಕರಣ ನಡೆದರೂ ಕಾಂಗ್ರೆಸ್ ನವ್ರು ರೇಪ್ ಮಾಡ್ತಾರೆ ಅಂತಾರೆ. ನಾನು ರೇಪ್ ಮಾಡಿದ್ನಾ, ಸಿದ್ದರಾಮಯ್ಯ ಮಾಡಿದ್ರಾ. ನಾವು ಅವರಿಗೆ ಶಿರಸಬಾಗಿ ನಮಸ್ಕರಿಸುತ್ತೇನೆ ಎಂದು ವ್ಯಂಗ ಮಾಡಿದ ಡಿಕೆಶಿ ಗೃಹ ಸಚಿವರು ಕೂಡಾ ಕಾನೂನು ರೀತಿ ನಡೆದುಕೊಳ್ಳುವಂತೆ ತಿಳಿಸಿದ್ರು.
ಇನ್ನು ಪ್ರಧಾನಿ ಹೇಳಿದ ಹಾಗೇ ಚಪ್ಪಾಳೆ ತಟ್ಟಿದ್ದೇವೆ, ಜಾಗಟೆ ಬಾರಿಸಿದ್ದೇವೆ, ದೀಪ ಹಚ್ಚಿದ್ದೇವೆ. ನಾವು ಮಾಡಿದ್ರೆ ತಪ್ಪು ಇವರು ಏನು ಬೇಕಾದ್ರು ಮಾಡಬಹುದಾ. ಹಾಗಾದ್ರೆ ವಿಧಾನಸೌಧದಲ್ಲಿ ಸಭೆ ಯಾಕೆ ಮಾಡಿದ್ರು ಎಂದು ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಡಿಕೆಶಿ ಟಫ್ ರೂಲ್ಸ್ ನಡುವೆಯೂ ಪಾದಯಾತ್ರೆಗೆ ಮುಂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.



