Latestಉತ್ತರ ಕನ್ನಡಜಿಲ್ಲಾ ಸುದ್ದಿ
ಉತ್ತರ ಕನ್ನಡ : ಮಂಗಕ್ಕೆ ಹೊಡೆದ ಗುಂಡೇಟು ತಗುಲಿ ಕಾರ್ಮಿಕನಿಗೆ ಗಾಯ

ಕಾರವಾರ : ಅಡಿಕೆ ತೋಟದಲ್ಲಿ ಬೀಡು ಬಿಟ್ಟಿದ್ದ ಮಂಗಗಳಿಗೆ ತೋಟದ ಮಾಲೀಕ ಹಾರಿಸಿದ ಗುಂಡು ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕನಿಗೆ ತಗುಲಿ ಗಾಯಗೊಂಡ ಘಟನೆ ಶಿರಸಿ ತಾಲೂಕಿನ ಬಕ್ಕಳದಲ್ಲಿ ನಡೆದಿದೆ.
ಪರಮೇಶ್ವರ ಭಟ್ (67) ಗುಂಡು ಹಾರಿಸಿದ ಆರೋಪಿಯಾಗಿದ್ದು, ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದ ಔಡಾಳದ ಕೇಶವ ರಾಮಾ ಮರಾಠಿ (27) ಗಾಯಗೊಂಡ ಕಾರ್ಮಿಕನಾಗಿದ್ದಾನೆ. ಗುಂಡು ಹಾರಿದ ಹೊಡೆತಕ್ಕೆ ಆತನ ಭುಜ, ಕೆನ್ನೆ ಹಾಗೂ ತಲೆಗೆ ತೀವ್ರ ತರಹದ ಪೆಟ್ಟಾಗಿದೆ.
ಗಾಯಾಳುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆರೋಪಿ ಪರಮೇಶ್ವರ ಭಟ್ ತಲೆಮರೆಸಿಕೊಂಡಿದ್ದು, ಘಟನೆ ಸಂಬಂಧ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



