ಲಕ್ಷ್ಮಣ ತೀರ್ಥ ನದಿಗೆ ತ್ಯಾಜ್ಯ – ಪಶ್ಚಿಮ ಘಟ್ಟಗಳ ಸಂರಕ್ಷಣಾ ಪಡೆಯ ಅಧ್ಯಕ್ಷರು ಅಸಮಧಾನ

ಕೊಡಗು: ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ ಅವರು ಹುಣುಸೂರಿನ ಹೊಸೂರು ನಗರದ ಕೊಳಚೆ ನೀರು ಲಕ್ಷ್ಮಣ ತೀರ್ಥ ನದಿಗೆ ಸೇರುವ ಪ್ರಮುಖ ಸ್ಥಳಗಳಾದ ದಾರಣೆ ಬೀದಿ-ಶಬರ್ ನಗರ ಕಟ್ಟೆ ಮಳಲವಾಡಿ, ರಾಗೂ ಮತ್ತಿತರ ಕಡೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.
ಈ ಕುರಿತು ಡಾ.ಅಂಬೇಡ್ಕರ್ ಭವನದಲ್ಲಿ ಚರ್ಚೆ ನಡೆಸಿ ಮಾತನಾಡಿದ ಅವರು, ಲಕ್ಷ್ಮಣ ತೀರ್ಥ ನದಿಗೆ ತ್ಯಾಜ್ಯ ಸೇರುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪಶ್ಚಿಮಘಟ್ಟ ಪ್ರದೇಶಗಳಿದ್ದರೂ ಹೊರ ದೇಶಗಳಿಂದ ಆಕ್ಸಿಜನ್ ಖರೀದಿ ಮಾಡಬೇಕಾದ ಪರಿಸ್ಥಿತಿ ಕೋವಿಡ್ ಸಂದರ್ಭ ಉದ್ಭವಿಸಿತ್ತು. ಪಶ್ಚಿಮಘಟ್ಟ ನಾಶವಾದರೆ 25 ವರ್ಷಗಳಲ್ಲಿ ಪರಿಸ್ಥಿತಿ ಏನಾಗಬಹುದು ಎನ್ನುವುದನ್ನು ಊಹಿಸಿಕೊಳ್ಳಿ ಎಂದರು.
ನಮ್ಮಲ್ಲಿರುವ ಹುಲ್ಲುಗಾವಲು, ದೇವರಕಾಡು ಗೋಮಾಳಗಳನ್ನು ಉಳಿಸಿಕೊಳ್ಳಲು ಎಲ್ಲರು ಪ್ರಯತ್ನಿಸಬೇಕು. ನಾನು ಜಿ.ಪಂ ಅಧ್ಯಕ್ಷನಾಗಿದ್ದಾಗ 92 ಕಿ.ಮಿ ಸುತ್ತುತ್ತಿದ್ದೆ. ಗ್ರಾಮದ ಹಾಡಿ ಜನರಿಗೆ ಸವಲತ್ತು ನೀಡಲು ಮೊದಲು ಆದ್ಯತೆ ನೀಡುತ್ತಿದೆ. ಅವರು ಸಹ ನಮ್ಮಂತೆ ಆರ್ಥಿಕವಾಗಿ ಮುಂದೆ ಬರಬೇಕು ಎಂಬುದೇ ನನ್ನ ಉದ್ದೇಶವಾಗಿತ್ತು ಎಂದು ತಿಳಿಸಿದರು.
ಹುಣುಸೂರು ಭಾಗದಲ್ಲಿ ಲಕ್ಷ್ಮಣ ತೀರ್ಥ ನದಿ ಕಲುಷಿತವಾಗುತ್ತಿದೆ, ತ್ಯಾಜ್ಯ ಬಂದು ಸೇರುವುದನ್ನು ತಡೆಯಲು ಸರಕಾರ ಈಗಾಗಲೇ ಮಂಜೂರು ಮಾಡಿರುವ ಅನುದಾನದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಜಿಲ್ಲಾಡಳಿತ, ಜಿ.ಪಂ, ಅರಣ್ಯ ಇಲಾಖೆ, ಕಂದಾಯ ಇಲಾಖೆ, ಪರಿಸರ ಇಲಾಖೆ ಸೇರಿದಂತೆ ಸ್ಥಳೀಯ ಆಡಳಿತ ವ್ಯವಸ್ಥೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.




