ಪೊಲೀಸರ ಯಶಸ್ವಿ ಕಾರ್ಯಾಚರಣೆ – ಬಲೆಗೆ ಬಿದ್ದ ಮುಸುಕುಧಾರಿ ಕೊಕ್ಕೆಚಾಕು ಚೋರ

ಕೊಡಗು : ಜಿಲ್ಲೆಯ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಒಂದೂವರೆ ತಿಂಗಳ ಅವಧಿಯಲ್ಲಿ ವರದಿಯಾದ 2 ಸುಲಿಗೆ, 1 ದೇವಸ್ಥಾನದ ವಿಗ್ರಹ ನಾಶ, ದೇವಸ್ಥಾನದ ಹುಂಡಿ ಕಳವು ಹಾಗೂ ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಒಂದು ದೇವಸ್ಥಾನದ ಕಳವು ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಕುಟ್ಟ ವೃತ್ತದ ಅಧಿಕಾರಿ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿರುತ್ತಾರೆ. ಸಿದ್ದಾಪುರ ಮೂಲದ 30 ವರ್ಷ ವಯಸ್ಸಿನ ಆರೋಪಿಯ ದಸ್ತಗಿರಿಯಿಂದ ಕುಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ 4 ಹಾಗೂ ಸೋಮವಾರಪೇಟೆ ಠಾಣಾ ವ್ಯಾಪ್ತಿಯ 1 ದೇವಸ್ಥಾನ ಕಳವು ಪ್ರಕರಣಗಳು ಪತ್ತೆಯಾಗಿವೆ.
ನಾಲ್ವೇರಿ ಗ್ರಾಮದ ಸುಳ್ಳಿಮಾಡ ಗೋಪಾಲ ತಿಮ್ಮಯ್ಯ ರವರಿಗೆ ಹಲ್ಲೆ ಮಾಡಿ ಸುಲಿಗೆ ಮಾಡಲು ಪ್ರಯತ್ನಿಸಿದ ಪ್ರಕರಣ, ಕೋತೂರು ಗ್ರಾಮದ ಗಂಗಮ್ಮ ರವರ ಕಿವಿಯ ಓಲೆಗಳನ್ನು ಕಿತ್ತು ಕೊಂಡು ಹೋದ ಸುಲಿಗೆ ಪ್ರಕರಣ, ಕೋತೂರು ಗ್ರಾಮದ ವನದೇವತೆ ದೇವಾಲಯದ ಗಣೇಶ ವಿಗ್ರಹಗಳನ್ನು ಭಗ್ನ ಮಾಡಿದ ಪ್ರಕರಣ, ಕೋತೂರು ಗ್ರಾಮದ ಮಹದೇಶ್ವರ ದೇವಾಲಯದ ಹುಂಡಿ ಕಳವು ಪ್ರಕರಣ, ಸೋಮವಾರಪೇಟೆ ಬಜೆಗುಂಡಿ ಗ್ರಾಮದ ಅಯ್ಯಪ್ಪ ದೇವಸ್ಥಾನದ ಹುಂಡಿ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪೊಲೀಸರು 4 ಪತ್ತೆ ತಂಡವನ್ನು ರಚಿಸಿದ್ದು ಕಳೆದ ಒಂದು ವಾರದಿಂದ ರಾತ್ರಿ ಹಗಲು ಎನ್ನದೇ ಪತ್ತೆ ಕಾರ್ಯದಲ್ಲಿ ತೊಡಗಿತ್ತು.
ಬೆಂಗಳೂರು, ಮೈಸೂರು, ಮಂಡ್ಯ, ಹಾಸನ, ಮಾನಂದವಾಡಿ ಕಡೆಗಳಿಗೆ ತೆರಳಿ ಈ ತಂಡದ ಸಿಬ್ಬಂದಿಗಳು ಕೊನೆಗೂ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಇತರೆ ಆರೋಪಿತರನ್ನು ಶೀಘ್ರ ಬಂಧಿಸಿ ಪ್ರಕರಣವನ್ನು ಭೇದಿಸಿದ ಪೊಲೀಸರಿಗೆ ಬಹುಮಾನವನ್ನು ಘೋಷಿಸಲಾಗಿದೆ.



