ಒಂಟಿ ಮಹಿಳೆಯ ಕೊಲೆ ಪ್ರಕರಣ: ಆರೋಪಿ ದಂಪತಿ ದೋಷಮುಕ್ತ

ಕೊಡಗು : ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ 2019ರಲ್ಲಿ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ದೋಷಮುಕ್ತಗೊಳಿಸಿ ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಮೊದಲ ಆರೋಪಿ ಸೋಮವಾರಪೇಟೆಯ ಅಬ್ಬೂರುಕಟ್ಟೆಯ ಲಿಖಿತಾ ಹಾಗೂ ಎರಡನೇ ಆರೋಪಿ ರವಿ ದೋಷಮುಕ್ತ ಆಗಿರುವವರಾಗಿದ್ದಾರೆ.
2019ರ ಮಾರ್ಚ್ 30ರಂದು ರಾತ್ರಿ ಮೇಕೇರಿಯ ಅವಿವಾಹಿತ ಮಹಿಳೆ ಉಷಾ ಎಂಬವರನ್ನು ಲಿಖಿತಾ ಹಾಗೂ ರವಿ ದಂಪತಿ ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾಗಿ ಆರೋಪಿಸಿ ಪ್ರಕರಣ ದಾಖಲಾಗಿತ್ತು.
ಅನಾರೋಗ್ಯದಿಂದ ಬಳಲುತ್ತಿದ್ದ ಉಷಾ ಮೇಕೇರಿಯ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಲಿಖಿತಾಳಿಗೆ ಉಷಾ ಚಿಕ್ಕಮ್ಮಳಾಗಿದ್ದ ಕಾರಣ ಚಿಕ್ಕಮ್ಮನನ್ನು ನೋಡಲೆಂದು ಲಿಖಿತಾ ಬಂದು ಹೋಗುತ್ತಿದ್ದಳು. ಅಲ್ಲದೆ ಖರ್ಚಿಗಾಗಿ ಹಣವನ್ನು ಕೂಡಾ ಪಡೆದುಕೊಳ್ಳುತ್ತಿದ್ದಳು ಎಂದು ಹೇಳಲಾಗಿದೆ. 2019ರ ಮಾರ್ಚ್ 30 ರಂದು ರಾತ್ರಿ ಲಿಖಿತಾ ಹಾಗೂ ರವಿ ದಂಪತಿ ಉಷಾ ಅವರ ಮನೆಗೆ ಬಂದಿದ್ದು, ಹಾಸಿಗೆಯಲ್ಲಿದ್ದ ಉಷಾ ಅವರನ್ನು ಲಿಖಿತಾ ದಿಂಬಿನಿಂದ ಉಸಿರುಗಟ್ಟಿಸಿದರೆ, ಪತಿ ರವಿ ಬಿದಿರಿನ ದೊಣ್ಣೆಯನ್ನು ಕುತ್ತಿಗೆಗೆ ಒತ್ತಿ ಹಿಡಿದು ಕೊಲೆ ಮಾಡಿದ್ದಾರೆ. ನಂತರ ಉಷಾಳ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿದ್ದಾರೆ ಎಂದು ಆರೋಪಿಸಲಾಗಿತ್ತು.
ಮಡಿಕೇರಿ ಗ್ರಾಮಾಂತರ ಪೊಲೀಸರು ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಭಾರತೀಯ ದಂಡ ಸಂಹಿತೆ ಕಲಂ 449, 302, 392, ರೆಡ್ ವಿತ್ 34 ರಡಿಯಲ್ಲಿ ದಾಖಲಾದ ಪ್ರಕರಣದ 1 ನೇ ಹಾಗೂ 2 ನೇ ಆರೋಪಿಯ ವಿರುದ್ಧದ ಆರೋಪ ಸಾಬೀತಾಗದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನೂ ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದೆ.
ಆರೋಪಿಗಳ ಪರ ವಕೀಲ ಬಿ.ಡಿ.ಕಪೀಲ್ ಕುಮಾರ್ ವಕಾಲತ್ತು ವಹಿಸಿದ್ದರು.
