ಸರ್ಕಾರದ ವೈಫಲ್ಯ ಬಗ್ಗೆ ನಡೆಯುವ ಚರ್ಚೆಯಿಂದ ತಪ್ಪಿಸಿಕೊಳ್ಳಲು ಮತಾಂತರ ವಿಧೆಯಕ ಜಾರಿ: ಈಶ್ವರ್ ಖಂಡ್ರೆ

ಕಲಬುರಗಿ: ಜನ ವಿರೋಧಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮೊದಲ ಬಾರಿಗೆ ಬೆಳಗಾವಿಯಲ್ಲಿ ಅಧಿವೇಶನ ಕರೆದಿದ್ದರು. ಆದರೆ, ಅಧಿವೇಶನದ ಉದ್ದೇಶ ಬಿಟ್ಟು ಜನರಿಗೆ ಮಾರಕವಾದ ವಿಧೆಯಕ ತಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಕಲಬುರಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುವ ಉದ್ದೇಶದಿಂದಲೇ ಬೆಳಗಾವಿಯ ಸುವರ್ಣಸೌಧದಲ್ಲಿ ಅಧಿವೇಶನ ಏರ್ಪಡಿಸಲಾಗಿತ್ತು. ಆದರೆ, ಜನ ವಿರೋಧಿ ಬಿಜೆಪಿ ಸರ್ಕಾರವು ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡಲಿಲ್ಲ. ಅಧಿವೇಶನ ವಿಸ್ತರಣೆ ಮಾಡುವಂತೆ ಸರ್ಕಾರಕ್ಕೆ ಪತ್ರ ಬರೆದ್ರು ಸಹ ಮುಂದೂಡಲಿಲ್ಲ. ಸರ್ಕಾರದ ವೈಫಲ್ಯ ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯುವ ಪ್ರಯತ್ನ ನಡೆದಿದೆ ಎಂದು ಕಿಡಿಕಾರಿದರು.
ಬಿಜೆಪಿಯಲ್ಲಿ ಅಸ್ಥಿರತೆ ಇದೆ ಅಲ್ಲಿ ಬಹಳಷ್ಟು ಅತೃಪ್ತಿ ಇದೆ. ಮುಖ್ಯಮಂತ್ರಿ ಬದಲಾವಣೆ ಆಗೋದು ಬಿಡೊದು ಅವರ ಪಕ್ಷಕ್ಕೆಬಿಟ್ಟ ವಿಚಾರ, ಬಿಜೆಪಿ ಸರ್ಕಾರ ಇದ್ದು ಇಲ್ಲದಂತ್ತಿದೆ. ಆಡಳಿತ ವೈಫಲ್ಯವಾದ ಮೇಲೆ ಇಂತಹ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು. ಮುಖ್ಯಮಂತ್ರಿ ಬದಲಾವಣೆ ವಿಚಾರ ಬಿಜೆಪಿಯವರ ತೀರ್ಮಾನ ಎಂದರು.
ಎಂಇಎಸ್ ವಿರುದ್ಧ ಕಿಡಿ :
ಗಡಿ ವಿಚಾರ ಮುಗಿದು ಹೋಗಿರುವ ವಿಚಾರ ಇದರಲ್ಲಿ ಎಂ ಇ ಎಸ್ ಕೂಡ ಪುಂಡಾಟಿಕೆ ಮಾಡಬಾರದು. ನಮ್ಮ ಭಾಷೆ, ನಾಡು-ನುಡಿ ರಕ್ಷಣೆ ಮಾಡೋದಕ್ಕೆ ನಾವು ಬದ್ದರಾಗಿದ್ದೆವೆ. ಎಂಇಎಸ್ ಪುಂಡಾಟಿಕೆ ಇಲ್ಲಿ ನಡೆಯೋದಿಲ್ಲ. ಪುಂಡಾಟಿಕೆ ಮಾಡಿದ್ರೆ ಮುಂದೆ ತಕ್ಕ ಪಾಠ ಕಲಿಯಬೇಕಾಗುತ್ತೆ ಎಂದು ಈಶ್ವರ್ ಖಂಡ್ರೆ ಹೇಳಿದ್ದಾರೆ.




