ಬಿಜೆಪಿಯಲ್ಲೇ ಇದ್ದಿದ್ದರೆ ಉನ್ನತ ಸ್ಥಾನದಲ್ಲಿರುತ್ತಿದೆ: ಹೆಚ್.ಸಿ.ಬಾಲಕೃಷ್ಣ

ರಾಮನಗರ : ಜೆಡಿಎಸ್ ಪಕ್ಷಕ್ಕಾಗಿ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿದ್ದೇನೆ. ಅದನ್ನೆಲ್ಲಾ ಆ ಪಕ್ಷದ ವರಿಷ್ಠರು ಮರೆತಿದ್ದಾರೆ ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಹೆಚ್.ಸಿ.ಬಾಲಕೃಷ್ಣ ಹೇಳಿದ್ದಾರೆ. ಬಿಡದಿಯಲ್ಲಿ ಪುರಸಭೆ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಬೇಕು ಎಂದು ಸಾಕಷ್ಟು ಕಷ್ಟಪಟ್ಟಿದ್ದೇವೆ ಎಂದರು.
ರಾಜಕೀಯ ಜೀವನದ ಆರಂಭದಲ್ಲಿ ಬಿಜೆಪಿಯಲ್ಲಿದ್ದ ನಾನು ಬಿಜೆಪಿಯಲ್ಲಿಯೆ ಮುಂದುವರಿದಿದ್ದರೆ ಇಂದು ಆ ಪಕ್ಷದಲ್ಲಿ ಅತ್ಯುನ್ನತ ಸ್ಥಾನದಲ್ಲಿರುತ್ತಿದ್ದೆ ಎಂದು ಹೇಳಿದ ಅವರು, ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಬೇಕಾದರೆ ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಪುರಸಭೆಯಲ್ಲಿಯೂ ಅಧಿಕಾರದಲ್ಲಿರಬೇಕು. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲಿದೆ ಎಂದರು.
ಮೇಕೆದಾಟು ಯೋಜನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮಾಜಿ ಸಚಿವ ಎಂ.ಬಿ.ಪಾಟೀಲ್ ಕಾರಣ ಎಂದು ಹೇಳಿದ ಅವರು, ರಾಜಕೀಯದಲ್ಲಿ ವೈಯಕ್ತಿಕ ಟೀಕೆ ಮಾಡುವುದು ಸರಿಯಲ್ಲ. ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ನಾನು ಮತ್ತು ಈಗಿನ ಶಾಸಕ ಎ.ಮಂಜು ಕಾಲದಲ್ಲಿ ಆಗಿರುವ ಅಭಿವೃದ್ಧಿ ಸಂಬಂಧ ಬಹಿರಂಗ ಚರ್ಚೆಗೆ ಸಿದ್ದ ಎಂದು ಸವಾಲು ಹಾಕಿದರು.
ಸರ್ಕಾರಿ ಭೂಮಿ ಕಬಳಿಸಿಲ್ಲ
ನನ್ನ ಪತ್ನಿಯ ಹೆಸರಿನಲ್ಲಿ ಡೆವಲಪ್ಮೆಂಟ್ ಕಂಪನಿ ಆರಂಭಿಸಿದ್ದು, ಲೇಔಟ್ ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದ ಅವರು ಯಾವುದೆ ಸರಕಾರಿ ಜಮೀನು ಕಬಳಿಸಿಲ್ಲ. ಅನುಮಾನವಿದ್ದರೆ ತನಿಖೆಗೆ ಸಿದ್ದ ಎಂದರು.
ಬಿಡದಿ ಕೈಗಾರಿಕಾ ಪ್ರದೇಶ ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದು, ಅಂತರಾಷ್ಟ್ರೀಯ ಮಟ್ಟದ ಮೂಲಭೂತ ಸೌಲಭ್ಯಗಳು ಇಲ್ಲಿ ಲಭಿಸಬೇಕು. ಇಂತಹದ್ದೇನು ಮಾಡದ ಶಾಸಕರು ಕೈಗಾರಿಕಾ ಸಂಸ್ಥೆಗಳು ನೀಡುವ ಸಿಎಸ್ಆರ್ ಫಂಡ್ನಿಂದ ಮಾಡಿರುವ ಸಣ್ಣ ಪುಟ್ಟ ಕಾಮಗಾರಿಗಳನ್ನು ನಾನು ಮಾಡಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.
ಬಿಡದಿ ಪುರಸಭೆ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಸರ್ವೆಗೆ ಚಾಲನೆ ನೀಡಿದ್ದು, ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಮತ್ತು ನಾನು, ಮಂಚನಬೆಲೆಯಿಂದ ಕುಡಿಯುವ ನೀರಿನ ಯೋಜನೆಗೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಅನುಮೊದನೆ ಕೊಡಿಸಿದ್ದೇನೆ ಎಂದು ಹೇಳಿದರು.
ನಾಲ್ಕು ವರ್ಷ ಶಾಸಕರಾಗಿದ್ದ ಮಂಜು ಇದುವರೆಗೆ ಆಶ್ರಯ ಯೋಜನೆ ನಿವೇಶನ, ಮನೆ ಹಂಚಿಕೆ ಮಾಡಿಲ್ಲ. ಇನ್ನೊಂದು ವರ್ಷದಲ್ಲಿ ಜಮೀನು ಖರೀದಿ ಮಾಡಿ ನಿವೇಶನ ಹಂಚಲು ಸಾಧ್ಯವೆ ಎಂದು ಬಾಲಕೃಷ್ಣ ಪ್ರಶ್ನಿಸಿದರು.




