ಜಿಲ್ಲಾ ಸುದ್ದಿಮೈಸೂರು

ಮೂವರು ಮನೆಗಳ್ಳರ ಬಂಧನ 15 ಲಕ್ಷ ಚಿನ್ನಾಭರಣ ವಶ

ಮೈಸೂರು : ಮನೆಗಳ್ಳತನ ಮಾಡುತ್ತಿದ್ದ ಮೂವರು ಖದೀಮರನ್ನು ಮೈಸೂರಿನ ಸಿಸಿಬಿ ಪೊಲೀಸರು ಬಂಧಿಸಿ ಬಂಧಿತರಿಂದ 15 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಬಂಧಿತರಿಂದ ಪೊಲೀಸರು 304 ಗ್ರಾಂ ತೂಕದ ಚಿನ್ನಾಭರಣ ಹಾಗೂ 1 ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ. ಮನೆಗಳ್ಳತನ ಪ್ರಕರಣಗಳನ್ನ ಭೇಧಿಸಲು ಹಾಗೂ ಅಪರಾಧ ತಡೆ ಮಾಸದ ಪ್ರಯುಕ್ತ ಸ್ವತ್ತಿನ ಪ್ರಕರಣಗಳನ್ನ ಪತ್ತೆಗಾಗಿ ಮೈಸೂರು ಕಮಿಷನರ್ ಸಿಸಿಬಿ ಘಟಕದ ಅಧಿಕಾರಿಗಳ ಮತ್ತು ಸಿಬ್ಬಂದಿ ತಂಡ ರಚನೆ ಮಾಡಲಾಗಿತ್ತು.

ಈ ತಂಡ ಡಿಸೆಂಬರ್ 9 ಹಾಗೂ ಡಿಸೆಂಬರ್ 19 ರಂದು ಮೂವರು ಮನೆಗಳ್ಳರನ್ನ ಬಂಧಿಸಿದ್ದಾರೆ. ಆರೋಪಿಗಳನ್ನ ವಿಚಾರ ಮಾಡಿದಾಗ ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಮನೆ ಕನ್ನ ಕಳುವು ಮಾಡಿರುವ ಬಗ್ಗೆ ಮಾಹಿತಿ ತಿಳಿದು ಬಂದಿದೆ. ಆರೋಪಿಗಳಿಂದ ಉದಯಗಿರಿ ಠಾಣೆಯ 2 ಮನೆ ಕನ್ನ ಕಳುವು ಪ್ರಕರಣಗಳಿಗೆ ಸಂಬಂಧಪಟ್ಟಂತೆ  15 ಲಕ್ಷ ರೂ.ಮೌಲ್ಯದ 304ಗ್ರಾಂ ತೂಕದ ಚಿನ್ನಾಭರಣಗಳು, ಆರೋಪಿಗಳು ಕೃತ್ಯವೆಸಗಲು ಬಳಸುತ್ತಿದ್ದ ಪರಿಕರಗಳು ಹಾಗೂ ಯಮಹಾ ಪ್ಯಾಸಿನೋ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬ ಆರೋಪಿಯ ವಿರುದ್ದ ಮೈಸೂರು ನಗರ ಮತ್ತು ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 30 ವಾರೆಂಟ್‌ ಗಳು ಇದ್ದು ಮತ್ತೊಬ್ಬ ಆರೋಪಿಯ ವಿರುದ್ದ ಮೈಸೂರು ನಗರ ಮಂಡಿ ಠಾಣೆಯಲ್ಲಿ 4 ವಾರೆಂಟ್‌ ಗಳು ಬಾಕಿ ಇವೆ.

ಮೂರನೇ ಆರೋಪಿಯು  ಒಂದು ಕೊಲೆ ಪ್ರಕರಣ, ಎರಡು ಕೊಲೆ ಪ್ರಯತ್ನ, ಒಂದು ಮನೆ ಕಳ್ಳತನ, ಒಂದು ಸುಲಿಗೆ ಪ್ರಕರಣಗಳಲ್ಲಿ ವಿಚಾರಣಾ ಆರೋಪಿಯಾಗಿದ್ದಾನೆ.

ಇದೇ ವಿಶೇಷ ತಂಡವು ಡಿ.9 ರಂದು ಮೈಸೂರು ಜಿಲ್ಲೆಗೆ ಸೇರಿದ ಅಪರಾಧ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿಯೊಬ್ಬನನ್ನು ವಶಕ್ಕೆ ಪಡೆದು, ಮೈಸೂರು ಜಿಲ್ಲೆ ಜಯಪುರ ಪೊಲೀಸರ ವಶಕ್ಕೆ ನೀಡಿದ್ದಾರೆ. ಈತನ ವಿರುದ್ದ 15 ವಾರೆಂಟ್‌ ಗಳು ಇರುವುದು ಕಂಡು ಬಂದಿದೆ. ಮೈಸೂರಿನಲ್ಲಿ ಇತ್ತೀಚೆಗೆ ಮನೆಗಳ್ಳತನ ಪ್ರಕರಣ ಹೆಚ್ಚಾಗಿತ್ತು ಆದ್ರೆ ಈಗ ಪೊಲೀಸರು ಕಳ್ಳರನ್ನು ಬಂಧಿಸಿದ್ದು, ಮೈಸೂರು ಜನ್ರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button