ಕೊಡಗಿನಲ್ಲಿ 3110 ಪಡಿತರ ಚೀಟಿಗಾಗಿ ಅರ್ಜಿ; ವಿತರಣೆಯಾದದ್ದು ಒಂದೇ ಒಂದು

ಕೊಡಗು : ಜಿಲ್ಲೆಯಲ್ಲಿ 2021-22ರಲ್ಲಿ ಪಡಿತರ ಚೀಟಿಗಾಗಿ 3110 ಅರ್ಜಿಗಳು ಸಲ್ಲಿಕೆಯಾಗಿದ್ದು, ಈ ಪೈಕಿ 1 ಪಡಿತರ ಚೀಟಿಯನ್ನು ವಿತರಿಸಲಾಗಿದೆ. ಇನ್ನುಳಿದ 3109 ಅರ್ಜಿಗಳು ವಿತರಿಸಲು ಬಾಕಿ ಇದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ವಿ.ಕತ್ತಿ ಸದನಕ್ಕೆ ಮಾಹಿತಿ ನೀಡಿದ್ದಾರೆ.
ಕೊಡಗು ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳು, 2021-22ರಲ್ಲಿ ವಿತರಣೆ ಮಾಡಿರುವ ಪಡಿತರ ಚೀಟಿಗಳ ಮಾಹಿತಿ ಹಾಗೂ ಪಡಿತರ ವಿತರಣೆ ಕುರಿತು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಸರಕಾರವನ್ನು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ ಸಚಿವ ಉಮೇಶ್ ಕತ್ತಿ, 2021 22ರಲ್ಲಿ ಒಟ್ಟು 3110 ಪಡಿತರ ಚೀಟಿಗಾಗಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಪೈಕಿ 1 ಪಡಿತರ ಚೀಟಿಯನ್ನು ವಿತರಣೆ ಮಾಡಿದ್ದು, 3109 ಅರ್ಜಿಗಳು ಬಾಕಿ ಉಳಿದಿವೆ. ಕೋವಿಡ್ ಲಾಕ್ಡೌನ್ ಸಂದರ್ಭ ಹೊಸ ಅರ್ಜಿಗಳು ಸಲ್ಲಿಕೆಯಾಗಿವೆ. ಅರ್ಜಿಗಳ ಕುರಿತು ಸ್ಥಳ ಪರಿಶೀಲನೆ ನಿಧಾನವಾಗಿದೆ. ಬಯೋಮೆಟ್ರಿಕ್ ಬಳಕೆ ಹಿಂಪಡೆದಿರುವ ಕಾರಣ ಪಡಿತರ ಚೀಟಿ ವಿತರಣೆ ಕಾರ್ಯ ತಾತ್ಕಾಲಿಕ ಸ್ಥಗಿತವಾಗಿದೆ ಎಂದು ಸಚಿವ ಉಮೇಶ್ ಕತ್ತಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 276 ನ್ಯಾಯಬೆಲೆ ಅಂಗಡಿಗಳಿದ್ದು, 1,05,701 ಆದ್ಯತಾ ಕುಟುಂಬಗಳಿಗೆ ಪಡಿತರ ವಿತರಣೆ ಮಾಡಲಾಗುತ್ತಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ ಅಡಿ 994.20 ಕ್ವಿಂಟಾಲ್ ಅಕ್ಕಿ, 1911.48 ಕ್ವಿಂಟಾಲ್ ಗೋಧಿ ವಿತರಿಸಲಾಗುತ್ತಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ 16,131.30 ಕ್ವಿಂಟಾಲ್ ಅಕ್ಕಿ ವಿತರನೆಯಾಗುತ್ತಿದೆ. ಎಂದು ಆಹಾರ ನಾಗರಿಕ ಸರಬರಾಜು ಸಚಿವ ಉಮೇಶ್ ವಿ.ಕತ್ತಿ, ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ್ದಾರೆ.




