ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ: ಧೃವನಾರಾಯಣ್

ಚಿಕ್ಕಮಗಳೂರು: ಬಿಜೆಪಿಯವರಿಗೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಬಗ್ಗೆ ಮಾತನಾಡಲು ನೈತಿಕತೆ ಏನಿದೆ ಎಂದು ಬಿಜೆಪಿ ವಿರುದ್ಧ ಕೆಪಿಸಿಸಿ ಕಾರ್ಯಾಧ್ಯಕ್ಷ ಧೃವನಾರಾಯಣ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ತಾವು ಶ್ರೀರಾಮಚಂದ್ರನ ಮೊಮ್ಮಕ್ಕಳು ಎಂದು ಹೇಳಿಕೊಳ್ಳುತ್ತಾರೆ. ನಾಚಿಕೆ ಆಗಲ್ವಾ? ರಾಜ್ಯದಲ್ಲಿ ಮೊದಲ ಬಾರಿ ಗೆದ್ದಾಗ 3 ಮುಖ್ಯಮಂತ್ರಿ, 3 ಪಕ್ಷಗಳಾಗಿ ವಿಭಜನೆಯಾಯ್ತು, ಈ ಮುಖ್ಯಮಂತ್ರಿಯೂ ಬದಲಾಗುತ್ತಾರೆಂದು ಈಶ್ವರಪ್ಪ ಮುನ್ಸೂಚನೆ ಕೊಟ್ಟಿದ್ದಾರೆ. ಇದು ಈಶ್ವರಪ್ಪ ಬಾಯಿಂದ ಬಂದ ಮಾತಲ್ಲ. ವರಿಷ್ಠರ ಬಾಯಿಂದ ಬಂದಿರೋ ಮಾತು. ಕಟೀಲ್, ಈಶ್ವರಪ್ಪ, ಸಿ ಟಿ ರವಿ ಮೇಲಿನವರು ಆಡಿದ ಮಾತನ್ನು ಇಲ್ಲಿ ಬಂದು ಹೇಳುತ್ತಾರೆ. ಬಿಜೆಪಿಯಲ್ಲಿ ಎರಡನೇ ಮುಖ್ಯಮಂತ್ರಿಯೂ ಬದಲಾಗುತ್ತಾರೆ ಎಂದು ಲೇವಡಿ ಮಾಡಿದರು.
ವರ್ಷವಾದರೂ ತಾಪಂ ಜಿಪಂ ಚುನಾವಣೆ ಏಕೆ ಮಾಡಿಲ್ಲವೆಂದು ಈಶ್ವರಪ್ಪ ಉತ್ತರಿಸಬೇಕು. ಅವರಿಗೆ ಧೈರ್ಯವಿಲ್ಲವಾ? ಈಶ್ವರಪ್ಪ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ. ಸಾಮಾಜಿಕ ನ್ಯಾಯದ ಬಗ್ಗೆ ಇವರಿಗೆ ನಂಬಿಕೆ ಇದ್ದಿದ್ದರೆ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಈ ಮೊದಲೇ ನಡೆಸುತ್ತಿದ್ದರು ಎಂದು ಟೀಕಿಸಿದರು.
