ಧಾರವಾಡ ಕ ವಿ ಸಂಘದ ಚುನಾವಣೆ: ಮಾಸ್ಕ್ ಕೇಳಲು ಹೋದ ಸಿಬ್ಬಂದಿಗೆ ಏಕವಚನದಲ್ಲಿಯೇ ನಿಂದಿಸಿದ ಅಧ್ಯಕ್ಷ ಆಕಾಂಕ್ಷಿ

ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈಮಾಸಿಕ ಚುನಾವಣೆ ಮತದಾನ ನಡೆಯುತ್ತಿದ್ದ ವೇಳೆಯಲ್ಲಿ, ಸಂಘದ ಮುಂಭಾಗದಲ್ಲಿ ಕೊರೊನಾ ರೂಲ್ಸ್ ಪರಿಶೀಲನೆಗೆ ತೆರಳಿದ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿಗೆ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ವ್ಯಕ್ತಿಯೊಬ್ಬ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ನಗರದ ಹೃದಯ ಭಾಗದಲ್ಲಿರುವ ಡಾ.ಬಿ ಆರ್ ಅಂಬೇಡ್ಕರ್ ಮೂರ್ತಿ ಬಳಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ಕಚೇರಿ ಮುಂಭಾಗದಲ್ಲಿ ಇಂದು ಸಂಘದ ಚುನಾವಣೆ ಮತದಾನ ನಡೆಯುತ್ತಿದೆ. ಈ ವೇಳೆಯಲ್ಲಿ ಪಾಲಿಕೆ ಸಿಬ್ಬಂದಿಗಳು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಈ ವೇಳೆ ಕ.ವಿ.ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಸಂಜೀವ್ ದುಮ್ಕನಾಳ ಸಂಘದ ಕಚೇರಿ ಮುಂಭಾಗದಲ್ಲಿ ಸರಿಯಾದ ಕ್ರಮದಲ್ಲಿ ಮಾಸ್ಕ್ ಹಾಕದೆ ಮತಯಾಚನೆ ಮಾಡುತ್ತಿದ್ದರಂತೆ. ಇದನ್ನು ನೋಡಿದ ಪಾಲಿಕೆಯ ಸಿಬ್ಬಂದಿಗಳು ದಂಡ ಹಾಕಲು ಮುಂದಾಗಿದ್ದು, ಇದರಿಂದ ಕೋಪಗೊಂಡ ಸಂಜೀವ ದುಮ್ಕನಾಳ ಪಾಲಿಕೆ ಮಹಿಳಾ ಸಿಬ್ಬಂದಿಗೆ ಏಕವಚನದಲ್ಲಿಯೇ ಮಾತನಾಡಿ, ಸಿಬ್ಬಂದಿಯ ಯೋಗ್ಯತೆ ಪ್ರಶ್ನೆ ಮಾಡಿರುವುದು ಸ್ಥಳೀಯರ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸ್ಥಾನದ ಸ್ಪರ್ಧಿ ಸಂಜೀವ ದುಮ್ಕನಾಳ ವರ್ತನೆಯಿಂದ ಗರಂ ಆದ ಪಾಲಿಕೆ ಮಾಹಿಳಾ ಸಿಬ್ಬಂದಿಯು, ಸ್ಥಳದಲ್ಲಿಯೇ ಸಂಜೀವ ಅವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಲಿಕೆಯ ಸಿಬ್ಬಂದಿ ಹಾಗೂ ಸಜೀವ ದುಮ್ಕನಾಳ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಸಂಘದ ಅಧ್ಯಕ್ಷ ಅಕಾಂಕ್ಷಿ ಸಂಜೀವ ಪಾಲಿಕೆ ಸಿಬ್ಬಂದಿಗೆ, ನಾನು ಪಾಲಿಕೆ ಸದಸ್ಯನ ತಮ್ಮ, ನನಗೆ ನಿಮ್ಮ ಕಮೀಷನರ್ ಗೊತ್ತು. ನಿನ್ನ ಯೋಗ್ಯತೆನೂ ಗೊತ್ತು ಎಂದು ನಿಂದಿಸಿದ್ದಾರೆ.
ಈ ವೇಳೆ ಮಧ್ಯ ಪ್ರವೇಶ ಮಾಡಿದ ಸ್ಥಳೀಯರು ಸಂಜೀವ ದುಮ್ಕಾನಳ ಅವರಿಗೆ ಮೊದಲು ನೀವು ಸರಿಯಾದ ರೀತಿಯಲ್ಲಿ ಮಾಸ್ಕ್ ಹಾಕಿಕೊಳ್ಳಿ ಎಂದು ಬುದ್ದಿ ಹೇಳುವುದರ ಜೊತೆಗೆ ಪಾಲಿಕೆಯ ಸಿಬ್ಬಂದಿಗೂ ಸಮಾಧಾನ ಮಾಡಿದ್ದಾರೆ. ಆದರೆ ಒಂದು ಪ್ರತಿಷ್ಠಿತ ಸಂಘದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿರುವ ಸಂಜೀವ ದುಮ್ಕನಾಳ ಪಾಲಿಕೆ ಮಹಿಳಾ ಸಿಬ್ಬಂದಿ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಎನ್ನುವುದು ಗೊತ್ತಿಲ್ಲ. ಇನ್ನೂ ಇವರ ಕೈಗೆ ಸಂಘದ ಚುಕ್ಕಾಣಿ ನೀಡಿದ್ದರೆ ಹೇಗೆ ಎಂಬ ಮಾತುಗಳು ಸ್ಥಳೀಯರಲ್ಲಿ ಕೇಳಿಬಂದವು.



