ಕಲಬುರಗಿ ಕನ್ನಡ ಸಾರಥಿಯಾಗಿ ವಿಜಯಕುಮಾರ ತೇಗಲತಿಪ್ಪಿ ಆಯ್ಕೆ

ಕಲಬುರಗಿ: ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಸಾಹಿತ್ಯ ಸಂಘಟಕ ವಿಜಯಕುಮಾರ ತೇಗಲತಿಪ್ಪಿ 557 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 16,619 ಮತದಾರರಿದ್ದು, ಭಾನುವಾರ ಬೆಳಗ್ಗೆ 8 ರಿಂದ ಸಾಯಂಕಾಲ 4 ಗಂಟೆವರೆಗೆ ನಡೆದ ಮತದಾನದಲ್ಲಿ ಒಟ್ಟು 7,765 ಮತಗಳು ಚಲಾವಣೆಗೊಂಡಿದ್ದವು. ಮೂರು ಬಾರಿ ಕಸಾಪ ಜಿಲ್ಲಾಧ್ಯಕ್ಷರಾಗಿ ನಾಲ್ಕನೆ ಬಾರಿಗೆ ಸ್ಪರ್ಧೆ ಮಾಡಿದ ವೀರಭದ್ರ ಸಿಂಪಿಗೆ ಹೀನಾಯ ಸೋಲು ಆಗಿದೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಈಬಾರಿ ಭಾರಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿತ್ತು. ಐದು ಜನ ಸ್ಪರ್ಧೆ ಮಾಡಿದ್ದರು. ಅದರಲ್ಲಿ ಹಾಲಿ ಅಧ್ಯಕ್ಷ ವೀರಭದ್ರ ಸಿಂಪಿ, ವಿಜಯಕುಮಾರ ತೇಗಲತಿಪ್ಪಿ ಮತ್ತು ಸಾಹಿತಿ ಬಿ.ಎಚ್.ನಿರಗುಡಿ ಮಧ್ಯೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು.
ಭಾನುವಾರ ಮಳೆ, ಶೀತ ಗಾಳಿ ಇದ್ದ ಹಿನ್ನಲೆಯಲ್ಲಿ ಮತದಾನವೂ ಕೂಡ ಕಮ್ಮಿಯಾಗಿದ್ದು ಸಂಜೆಯೇ ನಡೆದ ಮತ ಏಣಿಕೆಯಲ್ಲಿ 559 ಮತಗಳ ಅಂತರದಿಂದ ವೀರಭದ್ರ ಸಿಂಪಿಯವರನ್ನು ಹಿಂದಿಕ್ಕಿ ವಿಜಯಕುಮಾರ ತೇಗಲತಿಪ್ಪಿ ಭರ್ಜರಿ ಗೆಲುವು ಸಾಧಿಸಿದ್ದಾರೆ.




