ನೀವೊಬ್ಬ ಬಕೆಟ್ ಸ್ವಾಮೀಜಿ: ಸುಲಫಲ ಶ್ರೀಗಳ ವಿರುದ್ಧ ಆಂದೋಲ ಶ್ರೀ ಕಿಡಿ

ಕಲಬುರ್ಗಿ: ಸಂಸದ ಪ್ರತಾಪ ಸಿಂಹಗೆ ಚಡ್ಡಿ ಬಿಚ್ಚಿ ಹೊಡಿತೀವಿ ಅಂತ ಹೇಳಿಕೆ ನೀಡಿದ ಸುಲಫಲ ಶ್ರೀಗಳ ವಿರುದ್ಧ ಆಂದೋಲಾ ಮಠದ ಸಿದ್ಧಲಿಂಗ ಶ್ರೀಗಳು ಕಿಡಿಕಾರಿದ್ದಾರೆ. ನೀವೊಬ್ಬ ಬಕೆಟ್ ಸ್ವಾಮೀಜಿ ಅಂತ ಸುಲಫಲ ಸ್ವಾಮೀಜಿಯನ್ನು ಟೀಕಿಸಿದ್ದಾರೆ.
ಮಾಜಿ ಸಚಿವ ಪ್ರೀಯಾಂಕ್ ಖರ್ಗೆ ಹಾಗೂ ದಲಿತರ ವಿರುದ್ಧ ಸಂಸದ ಪ್ರತಾಪ ಸಿಂಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಅಂತ ನಿನ್ನೆ ಕಲಬುರ್ಗಿಯಲ್ಲಿ ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರಲ್ಲಿ ಪಾಲ್ಗೊಂಡ ಸುಲಫಲ ಶ್ರೀಗಳು, ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿ ಕ್ಷಮೆಯಾಚಿಸುವಂತೆ ಆಗ್ರಹಿಸಿದರು. ಮುಂದಿನ 15 ದಿನಗಳಲ್ಲಿ ಕ್ಷಮೆ ಕೇಳದಿದ್ದರೆ ಮೈಸೂರಿಗೆ ಬಂದು ನಿಮ್ಮ ಮನೆ ಮುಂದೆ ಕುಳಿತು ಚಡ್ಡಿ ಬಿಚ್ಚಿ ಹೊಡಿಬೇಕು ಆಗುತ್ತೆ ಅಂತ ಹೇಳಿಕೆ ನೀಡಿದ್ದರು.
ಸುಲಫಲ ಶ್ರೀಗಳ ಈ ಹೇಳಿಕೆಗೆ ಆಂದೋಲಾ ಶ್ರೀಗಳು ಕಿಡಿಕಾರಿದ್ದಾರೆ. ನಿಮಗೆ ತಾಕತ್ತಿದ್ದರೆ ಹೋಗಿ ಚಡ್ಡಿ ಬಿಚ್ಚಿ ಹೊಡೀರಿ ನೋಡೋಣ, ಮೈಸೂರಿಗೆ ಹೋಗಿ ಹೊಡೆದು ಬಂದ್ರೆ ನಿಮ್ಮ ಕಾವಿಗೆ ಗೌರವ ಕೊಡ್ತೀವಿ ಅಂತ ಸವಾಲು ಹಾಕಿದ್ದಾರೆ. ಯಾರು ಕರೀತಾರೋ ಅಲ್ಲಿಗೆ ಹೋಗಿ ಅವರ ಪರ ಮಾತಾಡ್ತೀರಿ. ಕರೆದವರ ಪರವಾಗಿ ಮಾತಾಡೋ ಬಕೆಟ್ ಸ್ವಾಮೀಜಿ ನೀವು ಅಂತ ಕುಟುಕಿದ್ದಾರೆ.
ಪ್ರತಾಪ್ ಸಿಂಹ ಮೇಲೆ ಹಲ್ಲೆ ಮಾಡುವ ನಿಮ್ಮದು ತಿರುಕನ ಕನಸು, ಶ್ರೀಗಳು ತಮ್ಮ ಹೇಳಿಕೆ ಹಿಂಪಡೆದು ಬೇಷರತ್ತಾಗಿ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಮುಂದೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಆಂದೋಲ ಶ್ರೀಗಳು ಸುಲಫಲ ಶ್ರೀಗಳಿಗೆ ಎಚ್ಚರಿಕೆ ನೀಡಿದ್ದಾರೆ.



