ಪೆಟ್ರೋಲ್ ಡೀಸೆಲ್ ದರ ಇಳಿಕೆ ಜನರ ಕಣ್ಣೊರೆಸುವ ತಂತ್ರ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಟೀಕೆ

ಮೈಸೂರು : ದಿನೇ ದಿನೇ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದು, ಜನರ ಆಕ್ರೋಶದ ಬೆನ್ನಲ್ಲೇ ಕೇಂದ್ರ ಮತ್ತು ರಾಜ್ಯ ಸರ್ಕಾರ ಇದೀಗ ಪೆಟ್ರೋಲ್-ಡೀಸೆಲ್ ದರ ಇಳಿಕೆ ಮಾಡಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಟೀಕಿಸಿದ್ದಾರೆ.
ಸುದ್ದಿಗಾರೊಂದಿಗೆ ಮಾತನಾಡಿದ ಅವರು ಉತ್ತರ ಪ್ರದೇಶ ಸೇರಿದಂತೆ 6 ರಾಜ್ಯಗಳ ಚುನಾವಣೆ ಹಿನ್ನೆಲೆ ಪೆಟ್ರೋಲ್ ಡೀಸೆಲ್ ಬೆಲೆ ಇಳಿಕೆ ಮಾಡಿದ್ದಾರೆ. ಕೇವಲ 5ರೂ ಇಳಿಕೆ ಮಾಡಿ ಮತ್ತೆ ಬೆಲೆ ಏರಿಕೆ ಮಾಡ್ತಾರೆ. ಪ್ರತಿನಿತ್ಯ 40ರಿಂದ 50ಪೈಸೆ ಮತ್ತೆ ಹೆಚ್ಚಳ ಆಗುತ್ತೆ. ಮೋದಿ ಕೇವಲ ಜನರ ಕಣ್ಣೊರೆಸುವ ತಂತ್ರ ಮಾಡ್ತಿದ್ದಾರೆ ಅಷ್ಟೇ ಎಂದು ಕಿಡಿಕಾರಿದರು.
ದರ ಇಳಿಕೆಯಾಗಿದ್ದರೆ ಬಿಜೆಪಿಯವರು ಸಂಭ್ರಮಾಚರಣೆ ಮಾಡ್ತಿದ್ದಾರೆ. ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ಜನರಿಂದ 60 ರೂ ಸೆಸ್ ವಸೂಲಿ ಮಾಡಿ ಇಷ್ಟು ದಿನ ಲೂಟಿ ಮಾಡಿದ್ದಾರೆ. ಕಳೆದ ಉಪ ಚುನಾವಣೆಯಲ್ಲಿ ಜನರ ಆಡಳಿತ ವಿರೋಧಿ ಅಲೆ ಗೊತ್ತಾಗಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಹಿನಾಯವಾಗಿ ಸೋತಿದೆ. ಜನವಿರೋಧಿ ಆಡಳಿತ ಮಾಡುತ್ತಿರುವ ಬಿಜೆಪಿಗೆ ಜನರು ತಕ್ಕಪಾಠ ಕಲಿಸಿದ್ದಾರೆ ಎಂದು ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮುಂದಿನ ಉತ್ತರಪ್ರದೇಶದ ಚುನಾವಣೆಗೆ ಬೆಲೆ ಇಳಿಕೆ ನಾಟಕ ಮಾಡುತ್ತಿದ್ದಾರೆ. ಸಿಎಂ ಬೊಮ್ಮಾಯಿ ಕೂಡಾ ಬೆಲೆ ಇಳಿಕೆ ಮಾಡ್ತಿವಿ ಇದರಿಂದ ಬೊಕ್ಕಸಕ್ಕೆ 2100 ಕೋಟಿ ನಷ್ಟ ಎಂದಿದ್ದಾರೆ. ಇದು ನಷ್ಟ ಅಲ್ಲ ಲೂಟಿ ಪ್ರಮಾಣ ಕಡಿಮೆ ಮಾಡಿದ್ದೀರಿ ಅಷ್ಟೇ. ಸಿದ್ದರಾಮಯ್ಯ ಸರ್ಕಾರದಲ್ಲಿ ಪೆಟ್ರೋಲ್ ಮೇಲೆ 7 ರೂ. ತೆರಿಗೆ ವಿಧಿಸಲಾಗಿತ್ತು. ಆದರೆ ನಿಮ್ಮ ಸರ್ಕಾರ 30ರೂ ತೆರಿಗೆ ಹಾಕಿದೆ. ನಿಮ್ಮ ಜನವಿರೋಧಿ ಆಡಳಿತಕ್ಕೆ ಜನರೇ ಪಾಠ ಕಲಿಸುತ್ತಾರೆ ಎಂದರು.
ದಿನೇ ದಿನೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದ್ದು, ಜನರು ಪರಿತಪಿಸುತ್ತಿದ್ದಾರೆ. ಇದೊಂದು ಕಣ್ಣೊರೆಸುವ ತಂತ್ರ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಗುಡುಗಿದರು.




