ದೀಪಾವಳಿ ಹಬ್ಬಕ್ಕೆ ತವರು ಮನೆಯಿಂದ ಬಾರದ ಪತ್ನಿ; ವಿಷ ಕುಡಿದು ಪತಿ ಸಾವು

ದಾವಣಗೆರೆ: ಮನೆಗೆ ಕರೆದರೂ ಪತ್ನಿ ಬಾರದ ಹಿನ್ನೆಲೆಯಲ್ಲಿ ಪತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಳವುದರ ಲಂಬಾಣಿಹಟ್ಟಿಯ ಶಿವನಾಯ್ಕ ಎಂಬಾತನೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಾತ. ವಿಪರೀತ ಮದ್ಯ ಸೇವನೆ ಮಾಡುತ್ತಿದ್ದ ಶಿವನಾಯ್ಕ ಆಗಾಗ್ಗೆ ಪತ್ನಿ ರೂಪಾಬಾಯಿ ಜೊತೆ ಜಗಳ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಶಿವನಾಯ್ಕನ ಪತ್ನಿ ತವರು ಮನೆಗೆ ಹೋಗಿದ್ದರು. ಈತ ಹೋಗಿ ಹಬ್ಬಕ್ಕೆ ಬರುವಂತೆ ಕರೆದಿದ್ದ. ಆದರೂ ಪತ್ನಿ ಬಂದಿರಲಿಲ್ಲ.
ರೂಪಬಾಯಿ ದಾವಣಗೆರೆ ತಾಲೂಕಿನ ನಾಗರಕಟ್ಟೆಯ ತವರು ಮನೆಯಲ್ಲಿ ತನ್ನ ಮಕ್ಕಳ ಜೊತೆ ಇದ್ದರು. ದೀಪಾವಳಿ ಹಬ್ಬಕ್ಕೆ ಪತ್ನಿ ಹಾಗೂ ಮಕ್ಕಳನ್ನು ಕರೆದರೂ ಬಾರದಿದ್ದಕ್ಕೆ ಗಲಾಟೆ ಆಗಿತ್ತು. ಇದರಿಂದ ಕುಗ್ಗಿಹೋದ ಶಿವನಾಯ್ಕ ವಿಷ ಸೇವಿಸಿದರು. ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಮೃತಪಟ್ಟಿದ್ದರು.
ಇನ್ನು ದಾವಣಗೆರೆಯ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಮೃತದೇಹ ಇತ್ತು. ಈ ವೇಳೆ ಶಿವನಾಯ್ಕನನ್ನು ಹೊಡೆದು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಮೃತನ ಕಡೆಯವರು ಹಾಗೂ ರೂಪಾಬಾಯಿ ಕಡೆಯವರ ನಡುವೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿದರು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಬಡಾವಣೆ ಪೊಲೀಸರು ಪರಿಸ್ಥಿತಿ ನಿಯಂತ್ರಿಸುವಲ್ಲಿ ಯಶಸ್ವಿಯಾದರು.




