ಹಾನಗಲ್ ಗೆಲುವು ಶ್ರೀನಿವಾಸ್ ಮಾನೆಯದ್ದೇ ಹೊರತು ಕಾಂಗ್ರೆಸ್ನದ್ದಲ್ಲ: ಕೆಎಸ್ ಈಶ್ವರಪ್ಪ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆಯಲ್ಲಿ ಸೋಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಅತ್ಯುತ್ತಮವಾಗಿ ಕೆಲಸ ಮಾಡಿದ್ದರಿಂದಾಗಿ ಗೆದ್ದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ. ಎಸ್. ಈಶ್ವರಪ್ಪ ಹಾಡಿಹೊಗಳಿದ್ದಾರೆ.
ದಾವಣಗೆರೆಯಲ್ಲಿ ಮಾತನಾಡಿದ ಅವರು ಹಾನಗಲ್ ನಲ್ಲಿ ಕಾಂಗ್ರೆಸ್ ಗೆಲುವು ಆಗಿರಬಹುದು. ಆದ್ರೆ ನಿಜವಾಗಿಯೂ ಅದು ಶ್ರೀನಿವಾಸ್ ಮಾನೆ ಗೆಲುವು. ಶ್ರೀನಿವಾಸ್ ಮಾನೆ ಸಾಕಷ್ಟು ಪ್ರಯತ್ನ ಹಾಕಿದ್ದಾರೆ. ನಾನು ಗೆಲುವಿನ ಕ್ರೆಡಿಟ್ ಅನ್ನು ಶ್ರೀನಿವಾಸ್ ಮಾನೆಗೆ ಕೊಡ್ತೀನಿ ಎಂದು ಹೇಳಿದರು.
ಸಿಎಂ ಆಗಿದ್ದಂತ ಸಿದ್ದರಾಮಯ್ಯ ಸೋತಿರಲಿಲ್ವಾ..? ಪ್ರಧಾನಿ ಆಗಿದ್ದ ಇಂದಿರಾಗಾಂಧಿ ಸೋತಿರಲಿಲ್ವಾ.. ಚುನಾವಣೆಯಲ್ಲಿ ಜನರು ಏನು ತೀರ್ಮಾನ ಕೊಡ್ತಾರೋ ಅದಕ್ಕೆ ತಲೆ ತಗ್ಗಿಸಬೇಕು, ಒಪ್ಪಬೇಕು ಎಂದರು.
ಸಿಂಧಗಿಯಲ್ಲಿ 31 ಸಾವಿರ ಅಂತರದಿಂದ ಗೆದ್ವಿ. ಡಿಕೆ ಶಿವಕುಮಾರ್ ನಾವು ಎರಡನೇ ಸ್ಥಾನಕ್ಕೆ ಬಂದ್ವಿ ಅಂತಾರೆ. ಅದೇನೋ ಹೇಳ್ತಾರಲ್ಲಾ ಹಾಗೆ. ಗೌಡಂದು ಒಂದು ಸಾವಿರ ಎಕರೆ, ನಂದು ಒಂದು ಎಕರೆ. ಒಟ್ಟು ಒಂದು ಸಾವಿರದ ಒಂದು ಎಕರೆ ಹಾಗಾಯ್ತು ಎಂಬಂತೆ ಡಿಕೆಶಿ ಮಾತನಾಡಿದ್ದಾರೆ. ಎರಡನೇ ಸ್ಥಾನದಲ್ಲಿ ಇರೋದೇ ದೊಡ್ಡ ಸಾಧನೆನಾ ಎಂದು ಈಶ್ವರಪ್ಪ ವ್ಯಂಗ್ಯವಾಡಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಳಸಿದ ಭಾಷೆ, ಅವರು ಬಳಿಸಿದ ಅಶ್ಲೀಲ ಪದಗಳು, ಜಾತಿ ಜಾತಿ ವೈಷಮ್ಯ, ಹಿಂದೂ, ಮುಸಲ್ಮಾನರ ಮಧ್ಯೆ ತಂದಿಟ್ಟಿದ್ದು ಸೇರಿದಂತೆ ಕಾಂಗ್ರೆಸ್ ಎಲ್ಲದರಲ್ಲೂ ಫೇಲ್ ಆಗಿದೆ. ಅವರು ಎರಡು ಕಡೆ ಗೆಲ್ತೀವಿ ಅಂದುಕೊಂಡ್ರೂ ಆಗಲಿಲ್ಲ ಎಂದು ತಿಳಿಸಿದರು.
ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಗೆ ಹಗಲು ರಾತ್ರಿ ನಿದ್ದೆ ಬರ್ತಿಲ್ಲ. ಸಿಎಂ ಕುರ್ಚಿ ಮೇಲೆ ಇಬ್ಬರಿಗೂ ಕಣ್ಣು ಇದೆ. ಕನಸಲ್ಲಿ ಮಾತ್ರ ಮುಖ್ಯಮಂತ್ರಿ ಕನಸು ಕಾಣ್ಲಿ. ಮುಂದಿನ ದಿನಗಳಲ್ಲಿ ಇಬ್ಬರ ಗುಂಪುಗಾರಿಕೆ ಯಾವ ಮಟ್ಟಕ್ಕೆ ಹೋಗುತ್ತೆ ನೋಡ್ತಾ ಇರಿ ಎಂದು ಭವಿಷ್ಯ ನುಡಿದರು.
