ಭಟ್ಕಳ : ನಮ್ಮ ನಾಡು ನುಡಿ, ಸಂಸ್ಕ್ರತಿ ನಮ್ಮ ಹೆಮ್ಮೆ: ಸಹಾಯಕ ಆಯುಕ್ತೆ ಮಮತಾ ದೇವಿ

ಕಾರವಾರ : ಭಟ್ಕಳ ತಾಲೂಕಿನ ಕ್ರೀಡಾಂಗಣದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತ್, ಪುರಸಭೆ ಭಟ್ಕಳ, ಜಾಲಿ ಪಟ್ಟಣ ಪಂಚಾಯತ್ ಇವರ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ದ್ವಜಾರೋಹಣವನ್ನು ನಡೆಸಿ ಮಾತನಾಡಿದ ತಾಲೂಕು ಸಹಾಯಕ ಆಯುಕ್ತೆ ಮಮತಾ ದೇವಿ ಅವರು, ನಾವು ಇಂದು ನಮ್ಮ ಹೆಮ್ಮೆಯಾದ ಕನ್ನಡ ಹಬ್ಬವನ್ನು ಆಚರಿಸುತ್ತಿದ್ದೇವೆ. ನಮ್ಮ ನಾಡು ನುಡಿ, ಸಂಸ್ಕ್ರತಿ ನಮಗೆ ಹೆಮ್ಮೆಯಾಗಿದೆ. ನಮ್ಮ ನಾಡು ನುಡಿಗಾಗಿ ನಾವು ಅವಿರತವಾಗಿ ದುಡಿಯೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಸುನೀಲ್ ನಾಯ್ಕ ಅವರು ಮಾತನಾಡಿ, ನಾಡು ನುಡಿ ಸಂಸ್ಕ್ರತಿ ಒಂದೇ ದಿನಕ್ಕೆ ಸಿಮಿತವಾಗದಿರಲಿ. ನಮ್ಮ ನಾಡು,ನುಡಿಗಾಗಿ ನಮ್ಮ ಹೃದಯ ಯಾವಾಗಲೂ ಮಿಡಿಯುತ್ತಿರಲಿ ಎಂದು ಹೇಳಿದರು.
ನಗರ ಪೋಲಿಸ್ ಠಾಣಾ ಪಿಎಸ್ಐ ಸುಮಾ ಆಚಾರಿಯವರ ಮುಂದಾಳತ್ವದಲ್ಲಿ ಪರೇಡ್ ನಡೆಸಿ ಸಹಾಯಕ ಆಯುಕ್ತೆ ಮಮತಾ ದೇವಿ ಅವರಿಗೆ ಗೌರವ ಸಲ್ಲಿಸಲಾಯಿತು
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಗೌರವಿಸಲಾಯಿತು. ತಾಲೂಕಿನಲ್ಲಿ ಸದಾ ಸಂಗೀತ ಸರಸ್ವತಿಯ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ಸಂಗೀತ ದಿಗ್ಗಜ,ಸಂಗೀತ ವಿಧ್ವಾನ್ ಅನಂತ ಹೆಬ್ಬಾರ್, ಸಾಹಿತ್ಯ ಕ್ಷೇತ್ರದ ಚಂದ್ರಶೇಖರ ಪಡುವಣಿ, ಹರಿಸೇವಾ ಕ್ಷೇತ್ರದ ಕುಪ್ಪಾ ನಾರಾಯಣ ನಾಯ್ಕ, ಯಕ್ಷಗಾನ ಕ್ಷೇತ್ರದ ಸುಬ್ರಾಯ ಭಟ್ಟ, ಕ್ರೀಡಾ ಕ್ರೇತ್ರದ ರಂಗ ಪಟಗಾರ, ಕನ್ನಡ ಸೇವೆಯನ್ನು ಗುರುತಿಸಿ ಪ್ರಶಾಂತ ಪಟಗಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪರೇಡ್ ಮುಂದಾಳತ್ವವನ್ನು ವಹಿಸಿದ್ದ ನಗರ ಪೋಲಿಸ್ ಠಾಣೆಯ ಇನ್ಸಪೆಕ್ಟರ್ ಸುಮಾ ಆಚಾರಿ ಹಾಗೂ ಪಿ.ಎಸ್.ಐ ಹನುಮಂತಪ್ಪ ಕುಡುಗುಂಟಿ ಅವರನ್ನು ಗೌರವಿಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಕನ್ನಡ ನಾಡು ನುಡಿಯ ಬಗ್ಗೆ ಶಿಕ್ಷಕರಾದ ಶ್ರೀಧರ್ ಶೇಟ್ ಮಾತನಾಡಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್. ಪಿ.ಬೆಳ್ಳಿಯಪ್ಪ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಭಾಕರ್ ಚಿಕ್ಕನಮನೆ, ಪುರಸಭಾ ಮುಖ್ಯಾಧಿಕಾರಿ ರಾಧಿಕಾ, ಜಾಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ವೆರ್ಣೇಕರ್, ಗ್ರಾಮೀಣ ಪೊಲೀಸ್ ಠಾಣಾ ಪಿ.ಎಸ್.ಐ ಭರತ್ ಕುಮಾರ್, ನೌಕರ ಸಂಘದ ಅಧ್ಯಕ್ಷ ಮೋಹನ್ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

