ಉತ್ತರ ಕರ್ನಾಟಕಕ್ಕೆ ತೊಂದರೆಯಾದ್ರೆ ಪ್ರತ್ಯೇಕ ರಾಜ್ಯ ಹೋರಾಟ ನಿಲ್ಲಲ್ಲ: ಸಚಿವ ಉಮೇಶ್ ಕತ್ತಿ

ಬಾಗಲಕೋಟೆ: ನಮ್ಮ ಭಾಗಕ್ಕೆ ತೊಂದರೆ ಆದಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟ ಇರೋದೆ. ಕೊರೊನಾದಿಂದ ಸರ್ಕಾರದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ. ನಾನೊಬ್ಬ ಜವಾಬ್ದಾರಿ ಮಂತ್ರಿ ನನಗೂ ಅರ್ಥ ಆಗುತ್ತೆ. ಪ್ರತ್ಯೇಕ ರಾಜ್ಯದ ಕೂಗು ಸದ್ಯಕ್ಕೆ ಬೇಕಾಗಿಲ್ಲ. ಬರುವ ಮೂರ್ನಾಲ್ಕು ವರ್ಷ ನೋಡೊಣ ಎಂದು ಸಚಿವ ಉಮೇಶ್ ಕತ್ತಿ ಹೇಳಿದರು.
ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆಗಾಗಿ ಎಲ್ಲರೂ ತಲೆ ಕೆಡಿಸಿಕೊಂಡಿದೀವಿ. ಯೋಜನೆ ಆಗಲೇಬೆಕೆಂಬ ಹಠ ಇದೆ, ಕೃಷ್ಣಾ ನೀರು ಬೆಳಗಾವಿಗೆ ಅಷ್ಟೇ ಅಲ್ಲ. ಬಾಗಲಕೋಟೆ, ವಿಜಯಪುರ ಹೈದರಾಬಾದ್ ಕರ್ನಾಟಕ ನೀರಾವರಿ ಆಗಬೇಕು. ಅದು ಆಗಲೇಬೆಕು, ಅದಕ್ಕೆ ತೊಂದರೆ ಆದಾಗ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಇರೋದೆ. ಕೃಷ್ಣಾ ಯೋಜನೆಯಲ್ಲಿ ತಾರತಮ್ಯ ಆದ್ರೆ ಪ್ರತ್ಯೇಕ ರಾಜ್ಯದ ಕೂಗು ಇರೋದೆ ಎಂದರು.
ನಾಳೆ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ. 50 ಸಾವಿರ ಮೇಲ್ಪಟ್ಟು ನಮ್ಮ ಅಭ್ಯರ್ಥಿಗಳು ಜಯ ಸಾಧಿಸ್ತಾರೆ ಎಂದರು.
ಬಾಗಲಕೋಟೆ ಜಿಲ್ಲೆಗೆ 77ದಿನ ಬಳಿಕ ಭೇಟಿ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿ ಅವರು, ಚುನಾವಣೆ ಇತ್ತು ಹಾಗಾಗಿ ಬರಲಿಕ್ಕೆ ಆಗಿಲ್ಲ. ನನಗೆ ಅರಣ್ಯ ಇಲಾಖೆ ಕೊಟ್ಟಿದ್ರಿಂದ ಅರಣ್ಯ ಪ್ರದೇಶಗಳಿಗೆ ಭೇಟಿಕೊಟ್ಟು ಬಂದಿದ್ದೇನೆ. ಆನೆ ಹಾವಳಿ ಹೀಗೆ ಹಾಸನ ಜಿಲ್ಲೆ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಬಾಗಲಕೋಟೆ ಜಿಲ್ಲೆಗೆ ನಾನೇನು ದೂರ ಇಲ್ಲ. ಇಲ್ಲೆ ಮಗ್ಗಲಿನಲ್ಲೇ ಇದ್ದೇನೆ, ಕೇಳಿದಾಗ ಒಂದು ಗಂಟೆಯಲ್ಲಿ ಇರ್ತೇನೆ. ಆದ್ರೂ ಅತೀವೃಷ್ಠಿಯಿಂದ ತೊಂದರೆ ಆದಾಗ ವಾರಕ್ಕೊಮ್ಮೆ ಬಂದಿದ್ದೇನೆ. ಕೋವಿಡ್ ಬಂದಾಗ ವಾರಕ್ಕೊಮ್ಮೆ ಬಂದಿದ್ದೇನೆ. ನಾನು ಬಂದಾಗ ಕಣ್ಣಿಗೆ ಕಾಣದ್ದು, ನಾನು ಬರದೇ ಇದ್ದಾಗ ನಿಮ್ಮ ಕಣ್ಣಿಗೆ ಕಂಡಿದೆ ಎಂದು ಜಾರಿಕೊಂಡರು.
ರಾಜ್ಯದಲ್ಲಿ ಕೊರೊನಾ ಬಂದು ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇರೋದ್ರಿಂದ ಚಾಲುಕ್ಯ ಉತ್ಸವ ಈ ಬಾರಿ ಇಲ್ಲ. ಮೈಸೂರು ಉತ್ಸವ, ಕಿತ್ತೂರು ಉತ್ಸವ ಸರಳವಾಗಿ, ನಿಯಮಿತ ಆಧಾರದ ಮೇಲೆ ಆಚರಿಸಲಾಗಿದೆ. ಚಾಲುಕ್ಯ ಉತ್ಸವ ನಿಯಮಿತವಾಗಿ ಆಚರಿಸಲು, ಸಿಎಂ ಗೆ ಲೆಟರ್ ಬರೀತಿನಿ. ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭಕ್ಕೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಟೆಂಡರ್ ಆಗದೇ ಇದ್ರೆ, ಮತ್ತೊಮ್ಮೆ ಟೆಂಡರ್ ಕರೆದು ಸ್ಟಾರ್ಟ್ ಮಾಡಲು ಚಿಂತಿಸಲಾಗುವದು ಎಂದರು.




