Heavy Rain: ಮೈಸೂರಿನಲ್ಲಿ ಧಾರಾಕಾರ ಮಳೆ: ಜನಜೀವನ ಅಸ್ತವ್ಯಸ್ತ

ಮೈಸೂರು: ಮೈಸೂರಿನಲ್ಲಿ ಕಳೆದ ಒಂದು ವಾರದಿಂದಲೂ ಎಡಬಿಡದೇ ಸುರಿಯುತ್ತಿರುವ ಹಿಂಗಾರು ಮಳೆ ಅವಾಂತರವನ್ನೇ ಸೃಷ್ಠಿಸಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಮೈಸೂರಿನ ಜೆ.ಸಿ.ನಗರದಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಠಿಸಿದೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಈ ಬಡಾವಣೆಯಲ್ಲಿ ಮನೆಗೆ ನೀರು ನುಗ್ಗಿದ್ದು, ಮಳೆ ನೀರಿನಿಂದಾಗಿ ರಾತ್ರಿಯಿಡಿ ಜನರು ಪರದಾಟ ನಡೆಸಿದ್ದಾರೆ.
ಸದ್ಯ ಈಗಲೂ ರಸ್ತೆಯಲ್ಲಿ ನೀರು ಹರಿಯುತ್ತಿದ್ದು, ಯಾವ ಅಧಿಕಾರಿಗಳು ಸಮಸ್ಯೆ ಕೇಳಲು ಬರುತ್ತಿಲ್ಲ. ರಾತ್ರಿಯಿಂದ ಅಧಿಕಾರಿಗಳಿಗೆ ಪೋನ್ ಮಾಡುತ್ತಿದ್ದೇವೆ. ಆದ್ರೆ ಯಾರು ಬರುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಮಹಾಮಳೆಗೆ ಕಾಂಪೌಂಡ್ ಕುಸಿದಿದೆ.
ಭಾರಿ ಮಳೆಯಿಂದಾಗಿ ನಗರದ ಕುಂಬಾರಕೊಪ್ಪಲಿನ ಆದಿಶಕ್ತಿ ದೇಗುಲದ ಬಳಿ, ಜಯದೇವ ಆಸ್ಪತ್ರೆಯ ಹಿಂಬದಿಯಿದ್ದ ಹಳೆ ಕಾಂಪೌಂಡ್ ಕುಸಿತವಾಗಿದೆ. ಸುಮಾರು 10ಮೀ ನಷ್ಟು ಕಾಂಪೌಂಡ್ ಕುಸಿದಿದ್ದು, ಅದೃಷ್ಟವಶಾತ್ ಕಾಂಪೌಂಡ್ ಬೀಳುವ ವೇಳೆ ಯಾವುದೇ ಸಂಚಾರ ಇರಲಿಲ್ಲ. ಇನ್ನೊಂದೆಡೆ ಬೋಗಾದಿಯ ರಿಂಗ್ ರಸ್ತೆಯಲ್ಲಿ ಮಿತಿ ಮೀರಿ ಮಳೆ ನೀರು ಹರಿಯುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ರಾತ್ರಿಯಿಡಿ ಸುರಿದ ಮಳೆಯಿಂದ ಈ ಅವಾಂತರ ಸೃಷ್ಠಿಯಾಗಿದೆ. ಬೋಗಾದಿಯ ಕೆರೆ ಕೋಡಿ ಬಿದ್ದ ಪರಿಣಾಮ ರಸ್ತೆಗೆ ನೀರು ಹರಿದಿದೆ. ಚರಂಡಿ ತುಂಬಿ ರಸ್ತೆ ಮೇಲೆ ಮಳೆನೀರು ಹರಿಯುತ್ತಿದ್ದು ವಾಹನ ಸವಾರರು ಪರದಾಟ ನಡೆಸುತ್ತಿದ್ದಾರೆ. ಒಟ್ಟಾರೆ ಹಿಂಗಾರು ಮಳೆಗೆ ಮೈಸೂರಿನಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.




