ಇಂಟಲಿಜನ್ಸ್ ವರದಿ ಹಲವು ಬಾರಿ ಸುಳ್ಳಾಗುತ್ತದೆ, ಹಾನಗಲ್ನಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ: ಸಚಿವ ಮುರುಗೇಶ ನಿರಾಣಿ

ಧಾರವಾಡ: ಹಾನಗಲ್ ಉಪ ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಯಾದ ಶಿವರಾಜ್ ಸಜ್ಜನ್ ಅವರು ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ. ಅವರು ಗೆಲ್ಲುವುದು ನೂರಕ್ಕೆ ನೂರರಷ್ಟು ಖಚಿತ. ಹಾನಗಲ್ನಲ್ಲಿ ನಮ್ಮ ಪಕ್ಷದ ಪರ ಜನರ ಒಲವು ಹೆಚ್ಚಾಗಿದೆ. ಅಲ್ಲದೆ ಹಲವು ಕಡೆಗಳಲ್ಲಿ ಇಂಟಲಿಜನ್ಸ್ ವರದಿ ಸುಳ್ಳಲಾಗಿರುವ ಉದಾಹರಣೆಗಳನ್ನು ನಾವು ಕೊಡಬಹುದಾಗಿದೆ. ಹಾನಗಲ್ನಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಸಚಿವ ಮುರುಗೇಶ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.
ಹಾನಗಲ್ ಚುನಾವಣೆ ಪ್ರಚಾರ ತೆರಳುವ ಮುನ್ನ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಕಳೆದೆರಡು ದಿನಗಳಿಂದ ಪ್ರಚಾರವನ್ನು ಮಾಡುತ್ತಿದ್ದಾರೆ. ಈಗ ನಾವು ಹಾಗೂ ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರು ಪ್ರಚಾರಕ್ಕೆ ತೆರಳುತ್ತಿದ್ದೇವೆ. ನೂರಕ್ಕೆ ನೂರರಷ್ಟು ನಮ್ಮ ಪಕ್ಷದ ಅಭ್ಯರ್ಥಿ ಹಾನಗಲ್ ನಲ್ಲಿ ಗೆಲ್ಲವುದು ಖಚಿತ ಎಂದರು.
ಇಂಟಲಿಜನ್ಸ್ ವರದಿಗಳು ಸಾಕಷ್ಟು ಕಡೆಗಳಲ್ಲಿ ಸುಳ್ಳಾಗಿರುವ ಸಾಕಷ್ಟು ಉದಾಹರಣೆಗಳು ನಮ್ಮ ಮುಂದೆ ಇವೆ. ಹಾಗಾಗಿ ಹಾನಗಲ್ನಲ್ಲಿ ಬಿಜೆಪಿ ಅಭ್ಯರ್ಥಿಗೆ ಹಿನ್ನಡೆಯಾಗುತ್ತದೆ ಅನ್ನುವುದು ಸುಳ್ಳು. ನಮ್ಮ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿ ಶಿವಾರಾಜ್ ಸಜ್ಜನ್ ಪರ ಹಾನಗಲ್ ಜನರು ಒಲವು ಹೊಂದಿದ್ದಾರೆ. ಆದರಿಂದ ಈ ಉಪ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ತಿಳಿಸಿದರು.




