ಕಲಬುರಗಿಯಲ್ಲಿ ಭೂಕಂಪನ; ಊರು ತೊರೆದ ಗಡಿಕೇಶ್ವರ ಜನತೆ

ಕಲಬುರಗಿ: ಕಳೆದ ಕೆಲ ದಿನಗಳಿಂದ ಭಯಾನಕವಾಗಿ ಭೂಮಿ ಕಂಪಿಸುತ್ತಿರುವ ಹಿನ್ನಲೆ ಭಯಭೀತರಾದ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮಸ್ಥರು ಗ್ರಾಮವನ್ನು ತೊರೆಯುತ್ತಿದ್ದಾರೆ.
ಗಡಿಕೇಶ್ವರ ಗ್ರಾಮದಲ್ಲಿ 15 ದಿನಗಳಿಂದ ಭೂಕಂಪನ ಆಗುತ್ತಿದೆ. ನಿನ್ನೆ ರಾತ್ರಿ 9-55 ಕ್ಕೆ 4.1 ತೀವ್ರತೆಯಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಇಂದು ಬೆಳಗ್ಗೆ ಕೂಡಾ ಮತ್ತೆ ಭೂಕಂಪಿಸಿದ ಅನುಭವಾಗಿದ್ದು, ಮನೆಗಳು ನೆಲಕ್ಕೂರುಳುತ್ತಿವೆ. ಅನಿವಾರ್ಯವಾಗಿ ಗ್ರಾಮವನ್ನು ತೊರೆಯುತ್ತಿರುವದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.
ಟ್ರ್ಯಾಕ್ಟರ್, ಎತ್ತಿನ ಬಂಡಿ,ಕಾರು, ಟಂಟಂಗಳ ಮೂಲಕ ಮನೆಯ ಸರಂಜಾಮು ಸಮೇತ ಗ್ರಾಮವನ್ನು ಜನರು ತೊರೆಯುತ್ತಿದ್ದಾರೆ. ಈಗಾಗಲೇ ಅರ್ಧದಷ್ಟು ಗ್ರಾಮ ಖಾಲಿಯಾಗಿದೆ. ಇಷ್ಟಾದರೂ ಅಧಿಕಾರಿಗಳು ಗ್ರಾಮಕ್ಕೆ ಬಂದು ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂಬ ಆಕ್ರೋಶ ಗ್ರಾಮಸ್ಥರು ವ್ಯಕ್ತ ಪಡಿಸಿದ್ದಾರೆ. ಗಡಿಕೇಶ್ವರ ಅಲ್ಲದೆ ನಿನ್ನೆ ರಾತ್ರಿ ಚಿಂಚೋಳಿ, ಕಾಳಗಿ, ಸೇಡಂ ಮೂರು ತಾಲೂಕಿನ ಬಹುತೇಖ ಗ್ರಾಮಗಳಲ್ಲಿ ಭೂಕಂಪನವಾಗಿದ್ದು ಇಲ್ಲಿಯೂ ಜನ ಆತಂಕದಲ್ಲಿದ್ದಾರೆ. ಸರಕಾರ ತಕ್ಷಣ ಗಮನ ಹರಿಸಿ ಜನರ ಆತಂಕಕ್ಕೆ ಸ್ಪಂದಿಸುವ ಕೆಲಸ ಮಾಡಬೇಕಿದೆ. ಇಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ.




