ಹಣವಿದ್ದ ಪರ್ಸ್ ಹಿಂತಿರುಗಿಸಿ ಮಾನವೀಯತೆ ಮೆರೆದ ವಿದ್ಯಾರ್ಥಿಗಳು

ಕೊಡಗು : ರಸ್ತೆ ಬದಿಯಲ್ಲಿ ಬಿದ್ದುಸಿಕ್ಕಿದ ರೂ. 15 ಸಾವಿರ ನಗದು ಹಣ ಹಾಗೂ ಪ್ರಮುಖ ದಾಖಲಾತಿಗಳಿದ್ದ ಪರ್ಸ್ ಅನ್ನು ಮೂವರು ವಿದ್ಯಾರ್ಥಿಗಳು ಅದರ ವಾರಸುದಾರರಿಗೆ ಹಿಂತಿರುಗಿಸುವ ಮೂಲಕ ಪ್ರಾಮಾಣಿಕತೆ ಹಾಗೂ ಮಾನವೀಯತೆ ಮೆರೆದಿದ್ದಾರೆ.
ಕೊಡಗಿನ ಮೂರ್ನಾಡು ಪ್ರಿ- ಯುನಿವರ್ಸಿಟಿ ಕಾಲೇಜಿನ ಕೆ.ಕೆ. ರಕ್ಷತ್, ವಿಕಾಸ್ ಮತ್ತು ವಿಶ್ವಾಸ್ ಎಂಬುವವರೇ ಪರ್ಸ್ ಮರಳಿಸಿರುವ ಮಾನವೀಯ ಅಂತಃಕರಣದ ವಿದ್ಯಾರ್ಥಿಗಳಾಗಿದ್ದಾರೆ. ನೆನ್ನೆ ದಿನ ಕಾಲೇಜು ಮುಂಭಾಗದ ರಸ್ತೆ ಬದಿಯಲ್ಲಿ ಅನಾಥವಾಗಿ ಬಿದ್ದಿದ್ದ ಪರ್ಸ್ ಇವರ ಕಣ್ಣಿಗೆ ಬಿದ್ದಿದೆ. ರೂ. 15 ಸಾವಿರ ನಗದು ಹಣ ಮತ್ತು ಪ್ರಮುಖ ದಾಖಲೆಗಳು ಅದರೊಳಗಿದ್ದವು. ಜೊತೆಗೆ ಮೊಬೈಲ್ ಸಂಖ್ಯೆಯಿತ್ತು. ಕೂಡಲೇ ಆ ಸಂಖ್ಯೆಗೆ ಕರೆ ಮಾಡಿ ಪರ್ಸ್ ಬಿದ್ದುಸಿಕ್ಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.
ನಂತರ ಅದರ ವಾರಸುದಾರರಿಗೆ ಒಪ್ಪಿಸಿದ್ದಾರೆ. ಇವರ ಈ ಕಾರ್ಯವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ನೆಲ್ಲಿಹುದಿಕೇರಿಯ ಜನಾರ್ದನ ಎಂಬುವವರು ನೆನ್ನೆ ದಿನ ಕೆಲಸಕ್ಕೆಂದು ಬೈಕ್ ನಲ್ಲಿ ಭಾಗಮಂಡಲದತ್ತ ಹೋಗುತ್ತಿದ್ದಾಗ ಮಾರ್ಗಮಧ್ಯದ ಮೂರ್ನಾಡು ಪ್ರಿ- ಯುನಿವರ್ಸಿಟಿ ಕಾಲೇಜು ಬಳಿ ಪರ್ಸ್ ಬಿದ್ದುಹೋಗಿತ್ತು. ಇದನ್ನು ಪ್ರಾಮಾಣಿಕವಾಗಿ ಮರಳಿಸಿ ಮಾನವೀಯತೆ ಮೆರೆದಿರುವ ರಕ್ಷತ್, ವಿಕಾಸ್ ಹಾಗೂ ವಿಶ್ವಾಸ್ ರವರಿಗೆ ಜನಾರ್ದನರವರು ಆಭಾರಿಯಾಗಿದ್ದಾರೆ.




